ADVERTISEMENT

ನೀರಿನಲ್ಲಿ ವಿಷ ಬೆರೆಸಿದ್ದ ಹೆಡ್‌ಕಾನ್‌ಸ್ಟೆಬಲ್‌ !

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:35 IST
Last Updated 24 ಮೇ 2017, 19:35 IST
ಬೆಂಗಳೂರು: ಹೆಡ್‌ಕಾನ್‌ಸ್ಟೆಬಲ್ ಸುಭಾಷ್‌ಚಂದ್ರ ಅವರು ವಿಷ ಬೆರೆಸಿದ್ದ ನೀರನ್ನು ಪತ್ನಿ–ಮಕ್ಕಳಿಗೆ ಕುಡಿಸಿ, ಮೂರು ತಾಸುಗಳ ಬಳಿಕ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ವೈದ್ಯಕೀಯ ವರದಿಯಿಂದ ಗೊತ್ತಾಗಿದೆ.
 
‘ಕ್ರಿಮಿನಾಶಕವನ್ನು ನೀರಿನಲ್ಲಿ ಬೆರೆಸಿದ್ದ ಸುಭಾಷ್‌ಚಂದ್ರ, ಸೋಮವಾರ ರಾತ್ರಿ 11.30ಕ್ಕೆ ಪತ್ನಿ ವೀಣಾ (28), ಮಗಳು ಮಾನ್ವಿ (3) ಹಾಗೂ ಮಗ ಪೃಥ್ವಿ (1) ಅವರಿಗೆ ಕುಡಿಸಿದ್ದಾರೆ. 12.20ರ ವೇಳೆಗೆ ಮೂವರೂ ಪ್ರಾಣ ಬಿಟ್ಟಿದ್ದಾರೆ.
 
ಅದಾದ ನಂತರ 3.30ಕ್ಕೆ ಸುಭಾಷ್‌ಚಂದ್ರ ಕೂಡ ಆ ನೀರನ್ನು ಕುಡಿದು, ವಿಷವನ್ನು ಸಿರೇಂಜ್‌ನಲ್ಲಿ ಹಾಕಿಕೊಂಡು ಕೈಗೆ ಚುಚ್ಚಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
 
ನರಕ್ಕೆ ಹೋಗಿಲ್ಲ: ‘ಚುಚ್ಚುಮದ್ದನ್ನು ಚುಚ್ಚಿಕೊಂಡಾಗ ವಿಷ ರಕ್ತನಾಳಕ್ಕೆ ಹೋಗಿಲ್ಲ. ಬದಲಾಗಿ ಮಾಂಸಖಂಡದಲ್ಲೇ ಉಳಿದಿದೆ. ಹೀಗಾಗಿ, ಅವರು ಬದುಕುಳಿದಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇನ್ನೂ 24 ತಾಸು ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಲಾಗುವುದು’ ಎಂದು ವೈದ್ಯರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.
 
ನಿಗೂಢ: ‘ಸುಭಾಷ್‌ ಚಂದ್ರ ಹಾಗೂ ವೀಣಾ ಅವರ 30ಕ್ಕೂ ಹೆಚ್ಚು ಸಂಬಂಧಿಗಳನ್ನು ವಿಚಾರಣೆ ನಡೆಸಿದ್ದೇವೆ. ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂಬುದನ್ನು ಬಿಟ್ಟರೆ, ಬೇರಾವುದೇ ಕಾರಣ ಹೇಳಿಲ್ಲ. ಸುಭಾಷ್‌ಚಂದ್ರ ಅವರ ಮೊಬೈಲ್‌ ವಶಕ್ಕೆ ಪಡೆದು, ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಲಾಗುತ್ತಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.