ADVERTISEMENT

ಪಾಯ ಕುಸಿದು ಒರಗಿದ ಕಟ್ಟಡ

ತಾಯಿ–ಮಗನಿಗೆ ಗಾಯ; ಕಾರ್ಯಾಚರಣೆಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:37 IST
Last Updated 30 ಅಕ್ಟೋಬರ್ 2014, 19:37 IST
ಬಸವೇಶ್ವರನಗರ ಬಳಿಯ ಶಂಕರಮಠದ ಕಿರ್ಲೋಸ್ಕರ್‌ ಕಾಲೊನಿಯಲ್ಲಿ ಪಾಯ ಕುಸಿದು ಪಕ್ಕದ ಮನೆಗೆ ಒರಗಿರುವ ಕಟ್ಟಡ
ಬಸವೇಶ್ವರನಗರ ಬಳಿಯ ಶಂಕರಮಠದ ಕಿರ್ಲೋಸ್ಕರ್‌ ಕಾಲೊನಿಯಲ್ಲಿ ಪಾಯ ಕುಸಿದು ಪಕ್ಕದ ಮನೆಗೆ ಒರಗಿರುವ ಕಟ್ಟಡ   

ಬೆಂಗಳೂರು: ಬಸವೇಶ್ವರನಗರ ಬಳಿಯ ಶಂಕರಮಠದ ಕಿರ್ಲೋಸ್ಕರ್‌ ಕಾಲೊನಿ­ಯಲ್ಲಿ ಗುರುವಾರ ಬೆಳಿಗ್ಗೆ ಪಾಯ ಕುಸಿ­ದಿದ್ದರಿಂದ ಮೂರು ಅಂತಸ್ತಿನ ಕಟ್ಟಡ ವಾಲಿಕೊಂಡು ಪಕ್ಕದ ಮನೆಗೆ ಒರಗಿಕೊಂಡಿತು. ಕಟ್ಟಡ ವಾಲಿಕೊಳ್ಳುತ್ತಿದ್ದಂತೆಯೇ ಅಲ್ಲಿನ ನಿವಾಸಿಗಳೆಲ್ಲ ಹೊರಗೆ ಓಡಿ ಬಂದಿ­ದ್ದರಿಂದ ಯಾವುದೇ ಪ್ರಾಣಾ­ಪಾಯ ಸಂಭವಿಸಿಲ್ಲ. ಆದರೆ, ಛಾವ­ಣಿಯ ಸ್ವಲ್ಪ ಭಾಗದ ಅವಶೇಷಗಳು ಮೈ–ಮೇಲೆ ಬಿದ್ದಿದ್ದರಿಂದ ರಾಜೇಶ್ವರಿ (34) ಮತ್ತು ಅವರ ಎಂಟು ವರ್ಷದ ಮಗ ಮಯೂರ್‌ ಗಾಯಗೊಂಡಿದ್ದಾರೆ.

ಕಟ್ಟಡದ ನೆಲಮಹಡಿಯಲ್ಲಿ ರಾಜೇ­ಶ್ವರಿ ಅವರು ಪತಿ–ಮಗನ ಜತೆ ನೆಲೆಸಿ­ದ್ದರು. ಮೊದಲ ಮಹಡಿಯಲ್ಲಿ ಕಟ್ಟ­ಡದ ಮಾಲೀಕರಾದ  ಮನೋರಂಜಿ­ತಮ್ಮ, ಅವರ ಪತಿ ಗೋವಿಂದರಾಜು ಹಾಗೂ ಮಗ ಬಾಲಾಜಿ ಇದ್ದರು. ಎರಡನೇ ಅಂತಸ್ತಿನ ಮನೆಯಲ್ಲಿ ಮತ್ತೊಂದು ಕುಟುಂಬ ವಾಸವಾಗಿತ್ತು. ಮಹಡಿಯಲ್ಲಿದ್ದ ಮೂರು ಸಣ್ಣ ಕೊಠಡಿಗಳಲ್ಲಿ ಖಾಸಗಿ ಕಂಪೆನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿ­ಗಳು ಉಳಿದುಕೊಂಡಿದ್ದರು.

ಬೆಳಿಗ್ಗೆ 6.30ರ ಸುಮಾರಿಗೆ ಕಟ್ಟಡವು ಮೆಲ್ಲಗೆ ಬಲಭಾಗಕ್ಕೆ ವಾಲಿಕೊಂಡಿತು. ನಿದ್ರೆಯಲ್ಲಿದ್ದ ಅಲ್ಲಿನ ನಿವಾಸಿಗಳು ಕೂಡಲೇ ಎಚ್ಚರಗೊಂಡು ಹೊರಗೆ ಓಡಿದರು. ಒಂದೆರಡು ನಿಮಿಷ­ಗಳಲ್ಲೇ ಕಟ್ಟಡ ಮತ್ತಷ್ಟು ವಾಲಿ­ಕೊಂಡು ಪಕ್ಕದಲ್ಲಿರುವ ಸುಂದರ್‌ ಎಂಬು­ವರ ಎರಡು ಅಂತಸ್ತಿನ ಮನೆಗೆ ಒರಗಿಕೊಂಡಿತು. ಆಗ ಸುಂದರ್‌ ಕೂಡ ಪತ್ನಿ–ಮಕ್ಕಳ ಜತೆ ಹೊರಗೆ ಓಡಿ ಬಂದರು.

ಬುಧವಾರ ರಾತ್ರಿ 3 ಗಂಟೆಯಲ್ಲಿ ಕಟ್ಟಡದ ಮೇಲ್ಛಾವಣಿಯಿಂದ ಮಣ್ಣು ಬೀಳುತ್ತಿತ್ತು. ಈ ವಿಷಯವನ್ನು ಬಾಡಿಗೆ­ದಾ­ರರು ಮಾಲೀಕರ ಗಮನಕ್ಕೆ ತಂದಿ­ದ್ದರು. ಅದನ್ನು ಪರಿಶೀಲಿಸಿದ ಮಾಲೀ­ಕರು, ಬೆಳಿಗ್ಗೆ ಸರಿ ಮಾಡಿಸುವುದಾಗಿ ಹೇಳಿದ್ದರು. ಆದರೆ, ಬೆಳಿಗ್ಗೆ ಅವರು ಎಚ್ಚರಗೊಳ್ಳುವ ಮೊದಲೇ ಈ ಕಟ್ಟಡ ವಾಲಿಕೊಂಡಿದೆ ಎಂದು ಪೊಲೀಸರು ಹೇಳಿದರು. ಘಟನೆಯಲ್ಲಿ ರಾಜೇಶ್ವರಿ ಅವರ ತಲೆ ಮತ್ತು ಕಾಲಿಗೆ ಪೆಟ್ಟಾಗಿದೆ. ಬಾಲಕ ಮಯೂರ್‌ನ ಕೈ ಮೇಲೆ ಕಲ್ಲು ಬಿದ್ದಿದ್ದರಿಂದ ಆತ ಕೂಡ ಗಾಯಗೊಂಡಿದ್ದಾನೆ. ಇಬ್ಬರೂ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.