ಬೆಂಗಳೂರು: ಸತ್ಯ ಸಾಯಿ ಬಾಬಾ ಅವರ 92ನೇ ಜನ್ಮ ದಿನಾಚರಣೆ ಮಹೋತ್ಸವದ ಪ್ರಯುಕ್ತ ಸತ್ಯ ಸಾಯಿ ಸೇವಾ ಸಂಸ್ಥೆ ಇದೇ 20 ಮತ್ತು 21ರಂದು ಜಾಗತಿಕ ವೇದ ಸಮ್ಮೇಳನ ಹಾಗೂ ‘ವಸುದೈವ ಕುಟುಂಬಕಂ ಸರ್ವಧರ್ಮ ಸಮೈಕ್ಯ ಸಮ್ಮೇಳನ’ವನ್ನು ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಆಯೋಜಿಸಿದೆ.
42 ದೇಶಗಳಿಂದ 600 ಪ್ರತಿನಿಧಿಗಳು ಮತ್ತು ದೇಶದ ವಿವಿಧೆಡೆಯಿಂದ ಸುಮಾರು 15,000 ಮಂದಿ ಬಾಬಾ ಅನುಯಾಯಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಪಾಲ ನರಸಿಂಹನ್ ಉದ್ಘಾಟಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆಯ ರಾಜ್ಯ ಹೆಚ್ಚುವರಿ ಸಂಚಾಲಕ ಡಾ.ಉದಯ ಧರ್ಮಸ್ಥಳ ತಿಳಿಸಿದ್ದಾರೆ.
ಜಗತ್ತಿಗೆ ಸವಾಲಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೇದದಲ್ಲಿರುವ ಪುರಾತನ ಜ್ಞಾನ ಅರಿಯುವುದು; ಆಧುನಿಕ ಕಾಲದಲ್ಲಿ ವೇದದ ಪ್ರಸ್ತುತತೆ; ಕೃಷಿ ಮತ್ತು ಪರಿಸರದಲ್ಲಿ ವೇದ ವಿಜ್ಞಾನದ ಪಾತ್ರ ಹಾಗೂ ಹೆಚ್ಚುತ್ತಿರುವ ಆಹಾರ ಕೊರತೆ ನೀಗಿಸಲು ವೇದದ ಪರಿಹಾರೋಪಾಯ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ವೇದ ಪಂಡಿತರು ಮತ್ತು ವಿವಿಧ ಧರ್ಮಗಳ ಪ್ರಮುಖರು ವಿಷಯ ಮಂಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.