ADVERTISEMENT

ಪ್ರಶ್ನೆಗಳ ಸುರಿಮಳೆ...

​ಪ್ರಜಾವಾಣಿ ವಾರ್ತೆ
Published 23 ಮೇ 2015, 20:18 IST
Last Updated 23 ಮೇ 2015, 20:18 IST

ಬೆಂಗಳೂರು: ಶಿಕ್ಷಣ ಮೇಳದ ಮೊದಲ ದಿನ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಇಟಿ ಮತ್ತು ಕಾಮೆಡ್‌–ಕೆ ಪ್ರವೇಶ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆಯಲು ಹೆಚ್ಚು ಉತ್ಸುಕತೆ ತೋರಿದರು.

ಸಿಇಟಿ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೋಡಲ್‌ ಅಧಿಕಾರಿ ಜಿಯಾವುಲ್ಲಾ ಖಾನ್‌ ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಬೇಕಾಯಿತು. ರ‍್ಯಾಂಕಿಂಗ್‌ ವ್ಯವಸ್ಥೆ, ಸೀಟು ಆಯ್ಕೆ, ಮೀಸಲಾತಿ, ಶುಲ್ಕ ಪಾವತಿ, ದಾಖಲೆಗಳ ಪರಿಶೀಲನೆ, ಕಾಲೇಜುಗಳ ಪ್ರವೇಶ ಪ್ರಕ್ರಿಯೆಯ ಬಗ್ಗೆ ಇದ್ದ ತಮ್ಮ ಅನುಮಾನಗಳನ್ನು ಖಾನ್‌ ಅವರಿಗೆ ವಿವರಿಸಿ ಮಾಹಿತಿ ಪಡೆದರು. ಖಾನ್‌ ಅವರು ಎಲ್ಲರ ಪ್ರಶ್ನೆಗಳನ್ನು ತಾಳ್ಮೆಯಿಂದ ಆಲಿಸಿ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮನವರಿಕೆಯಾಗುವಂತೆ ವಿವರಿಸಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದರು.

ಇದಕ್ಕೂ ಮುನ್ನ, ಎಂ.ಎಸ್‌. ರಾಮಯ್ಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ನಂದ ಕಿಶೋರ್‌ ಆಳ್ವ ಅವರು ಕಾಮೆಡ್‌–ಕೆ ಪ್ರವೇಶ ಪ್ರಕ್ರಿಯೆಯನ್ನು ವಿವರಿಸಿದಾಗಲೂ, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮಲ್ಲಿರುವ ಗೊಂದಲಗಳನ್ನು ಅವರಿಗೆ ಹೇಳಿದರು.
ಕೌನ್ಸೆಲಿಂಗ್‌, ದಾಖಲೆಗಳ ಪರಿಶೀಲನೆ, ಪ್ರವೇಶ, ಕೋರ್ಸ್‌ ಶುಲ್ಕ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ, ನಂದ ಕಿಶೋರ್‌ ಅವರಿಂದ ಉತ್ತರಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.