ADVERTISEMENT

ಪ್ರಾಂತೀಯ ಹಿಂದೂ ಅಧಿವೇಶನ ನಾಳೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:35 IST
Last Updated 19 ಜನವರಿ 2017, 19:35 IST

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರಾಂತೀಯ ಹಿಂದೂ ಅಧಿವೇಶನ ಇದೇ 21 ಹಾಗೂ 22ರಂದು  ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿರಿಯ ಸಂಶೋಧಕ ಡಾ. ಚಿದಾನಂದಮೂರ್ತಿ, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಆದಿಚುಂಚನಗಿರಿಮಠದ ಸೌಮ್ಯನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಸಮನ್ವಯಕಾರ ಮೋಹನಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಕ್ಷಿಣ ಕರ್ನಾಟಕ ಜಿಲ್ಲೆಗಳ 50ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ಹಿಂದೂ ಸಂಘಟಕರು, ಲೇಖಕರು, ಸಾಮಾಜಿಕ ಹೋರಾಟಗಾರರು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಿಂದೂ ಸಂಘಟನೆಗಳಲ್ಲಿ ಏಕತೆ ಸಾಧಿಸಲು ಹಾಗೂ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಆಕ್ರಮಣಗಳ ವಿರುದ್ಧ ಹೋರಾಟ ಮಾಡುವುದು ಅಧಿವೇಶನದ ಉದ್ದೇಶ’ ಎಂದರು.

‘ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ರಾಜ್ಯದ ಹಿಂದೂ ನಾಯಕರ ಬರ್ಬರ  ಹತ್ಯೆಗಳು ನಡೆಯುತ್ತಿವೆ.   ಹಿಂದೂ ಸಂತರ ಅಪಮಾನ, ಹಿಂದೂ ವಿರೋಧಿ ಕಾಯಿದೆಗಳು, ಗೋಹತ್ಯೆ, ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳ ದಾಖಲು, ಹಿಂದೂ ವಿರೋಧಿ ಧೋರಣೆಗಳು ಹೆಚ್ಚಾಗುತ್ತಿದೆ. ಎಲ್ಲಾ ಆಕ್ರಮಣಗಳಿಗೆ ಕಡಿವಾಣ ಹಾಕಲು ಚಿಂತನೆ ಮತ್ತು ಚರ್ಚೆ ಮಾಡುವುದು ಅನಿವಾರ್ಯ’ ಎಂದು ಹೇಳಿದರು.

‘ಕನ್ನಯ್ಯಾ ಕುಮಾರ್ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಯೋತ್ಪಾದಕರ ಪರವಾಗಿ ಮಾಧ್ಯಮಗಳಲ್ಲಿ ವಾದಿಸುತ್ತಿದ್ದಾರೆ. ದೇಶಪ್ರೇಮವಿಲ್ಲದ  ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.