ಆನೇಕಲ್: ಕಳೆದ ಮೂರು ದಿನಗಳಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ಕರಡಿಧಾಮದಿಂದ ತಪ್ಪಿಸಿಕೊಂಡಿದ್ದ ಕರಡಿಯು ಬುಧವಾರ ಬೆಳಗ್ಗೆ ತಾಲ್ಲೂಕಿನ ಬಗ್ಗನದೊಡ್ಡಿ ಬಳಿ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಕರಡಿಯನ್ನು ಕಂಡ ಗ್ರಾಮಸ್ಥರು ಓಡಿಸಲು ಯತ್ನಿಸಿದಾಗ ಅವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಇಬ್ಬರು ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಕಂಡ ಕರಡಿಯು ಗ್ರಾಮದ ಕುರಿದೊಡ್ಡಿಯೊಂದಕ್ಕೆ ನುಗ್ಗಿದೆ. ಕೂಡಲೇ ಗ್ರಾಮಸ್ಥರು ಕರಡಿಯನ್ನು ತಡೆದು ಹರಸಾಹಸದಿಂದ ಬನ್ನೇರುಘಟ್ಟ ಕಾಡಿನತ್ತ ಅಟ್ಟಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕರಡಿಧಾಮವನ್ನು ನಿರ್ವಹಿಸುತ್ತಿರುವ ಎಸ್ಓಎಸ್ ಸಂಸ್ಥೆಯಾಗಲಿ, ಅರಣ್ಯ ಇಲಾಖೆಯ ಸಿಬ್ಬಂದಿಯಾಗಲಿ ಕರಡಿಯನ್ನು ರಕ್ಷಿಸಿ ಕೊಂಡೊಯ್ಯಲು ಮುಂದಾಗಿಲ್ಲ. ಗ್ರಾಮದ ಪಕ್ಕದಲ್ಲಿಯೇ ಕಾಡಿಗೆ ಸೇರಿರುವ ಕರಡಿಯು ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.