ಬೆಂಗಳೂರು: ಸುಂಕದಕಟ್ಟೆ ಬಳಿಯ ಬೈರವೇಶ್ವರನಗರದಲ್ಲಿ ಏಳು ವರ್ಷದ ಬಾಲಕಿ ಮೇಲೆ ಶ್ರೀನಿವಾಸ್ (28) ಎಂಬಾತ ಅತ್ಯಾಚಾರ ಎಸಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಡಗಿಯಾದ ಶ್ರೀನಿವಾಸ್, ತನ್ನ ತಾಯಿಗೆ ಪರಿಚಯವಿರುವ ಮಹಿಳೆಯೊಬ್ಬರ ಮಗಳ ಮೇಲೆ ಶುಕ್ರವಾರ (ಜು.25) ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್, ತಾಯಿಯೊಂದಿಗೆ ಬೈರವೇಶ್ವರನಗರ ಎರಡನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆತನ ತಾಯಿ ಸುಂಕದಕಟ್ಟೆಯ ಖಾಸಗಿ ಶಾಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಾರೆ. ಅದೇ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳ ತಾಯಿ, ಅವರಿಗೆ ಪರಿಚಿತರಾಗಿದ್ದರು.
ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿರುವ ವಿದ್ಯಾರ್ಥಿನಿ ತಾಯಿ, ಕೆಲಸಕ್ಕೆ ಹೋಗುವಾಗ ಮಗಳನ್ನು ಶ್ರೀನಿವಾಸ್ನ ತಾಯಿಯ ಬಳಿ ಬಿಟ್ಟು ಹೋಗುತ್ತಿದ್ದರು. ಅದೇ ರೀತಿ ಅವರು ಶುಕ್ರವಾರ ಮಗಳನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದರು. ಆ ದಿನ ಸಂಜೆ ಆರೋಪಿ ತಾಯಿ, ಬಾಲಕಿಗೆ ಮನೆಯಲ್ಲಿ ಇರುವಂತೆ ಹೇಳಿ ತರಕಾರಿ ತರಲು ಹೋಗಿದ್ದರು. ಆಗ ಮನೆಯಲ್ಲೇ ಇದ್ದ ಶ್ರೀನಿವಾಸ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಬಾಲಕಿಗೆ ಭಾನುವಾರ ಜ್ವರ ಬಂದಿದ್ದರಿಂದ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಅವರು ಮಂಗಳವಾರ ರಾತ್ರಿ ಠಾಣೆಗೆ ದೂರು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.