ಬೆಂಗಳೂರು: ಗಿರಿನಗರ ಸಮೀಪದ ವೀರಭದ್ರನಗರದ ಮನೆಯೊಂದರಲ್ಲಿ ಭಾನುವಾರ ರಾತ್ರಿ ಆರು ವರ್ಷದ ಬಾಲಕಿ ಶವ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಬಾಲಕಿ ಏ. 20ರಂದು ಸಂಜೆ 6ರ ಸುಮಾರಿಗೆ ಕಾಣೆಯಾಗಿದ್ದಳು. ಮನೆ ಸುತ್ತಮುತ್ತ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದ ಪೋಷಕರು, ಮರುದಿನವೇ ಗಿರಿನಗರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.
‘ಬಾಲಕಿಯ ಮನೆಯ ಪಕ್ಕದ ಮನೆಯಲ್ಲಿ ಕಲಬುರ್ಗಿಯ ಅನಿಲ್ ಎಂಬಾತ ವಾಸವಿದ್ದ. ಏ. 21ರಂದು ಆತ ಊರಿಗೆ ಹೋಗಿದ್ದ. ಹೀಗಾಗಿ ಮನೆಗೆ ಬೀಗ ಹಾಕಲಾಗಿತ್ತು. ಆ ಮನೆಯಿಂದ ಭಾನುವಾರ ರಾತ್ರಿ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು, ಬೀಗ ಒಡೆದು ಒಳಗೆ ಹೋಗಿ ಪರಿಶೀಲಿಸಿದ್ದರು. ಆಗ ಕೊಠಡಿಯಲ್ಲಿದ್ದ ಪೆಟ್ಟಿಗೆಯಲ್ಲಿ ಬಾಲಕಿಯ ಶವವಿರುವುದು ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಅನಿಲ್ ಅತ್ಯಾಚಾರ ಎಸಗಿ ಬಾಲಕಿಯನ್ನು ಕೊಲೆ ಮಾಡಿರುವ ಶಂಕೆ ಇದೆ. ಯಾರಿಗೂ ಗೊತ್ತಾಗಬಾರದು ಎಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ’ ಎಂದು ಪೋಷಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
‘ಕೆಲ ವರ್ಷಗಳ ಹಿಂದೆ ಪತ್ನಿ ಸಮೇತ ನಗರಕ್ಕೆ ಬಂದಿದ್ದ ಅನಿಲ್, ಬಾಡಿಗೆ ಮನೆಯಲ್ಲಿ ವಾಸವಿದ್ದ.
ನೆರೆಮನೆಯವರೊಂದಿಗೂ ಒಡನಾಟವಿಟ್ಟುಕೊಂಡಿದ್ದ. ಬಾಲಕಿಗೆ ತಿಂಡಿ ಕೊಟ್ಟು ಪರಿಚಯ ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
ಪತ್ನಿ ಕರೆ ತರುತ್ತೇನೆ ಎಂದು ಹೋದ
‘ಅನಿಲ್ ಪತ್ನಿ ಕಳೆದ ತಿಂಗಳು ತವರು ಮನೆಗೆ ಹೋಗಿದ್ದರು. ಬಾಲಕಿ ಕಾಣೆಯಾದ ಮರುದಿನವೇ ಪತ್ನಿಯನ್ನು ಕರೆ ತರುತ್ತೇನೆ ಎಂದು ಅಕ್ಕ–ಪಕ್ಕದವರಿಗೆ ಹೇಳಿ ಹೋಗಿದ್ದಾನೆ. ಇದುವರೆಗೂ ವಾಪಸ್ ಬಂದಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಶವವು ಕೊಳೆತ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅತ್ಯಾಚಾರದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ. ಜತೆಗೆ ಅನಿಲ್ ಪತ್ತೆಗೆ ವಿಶೇಷ ತಂಡವೊಂದನ್ನು ರಚಿಸಿದ್ದೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.