ಬೆಂಗಳೂರು: ‘ಉತ್ತಮ ಸಮಾಜ ನಿರ್ಮಾಣಕ್ಕೆ ಬಾಹುಬಲಿಯ ಅಹಿಂಸೆ, ತ್ಯಾಗ, ಸತ್ಯದ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು’ ಎಂದು ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಹೇಳಿದರು.
ಸಾಲಿಗ್ರಾಮ ಜೈನಮಿತ್ರ ಮಂಡಳಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ 15ನೇ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅಹಿಂಸೆ, ತ್ಯಾಗ, ಸತ್ಯದ ಮಾರ್ಗಗಳನ್ನು ಅನುಸರಿಸಿದ ಶ್ರೇಯಸ್ಸು ಬಾಹುಬಲಿಗೆ ಸಲ್ಲುತ್ತದೆ’ ಎಂದ ಅವರು, ‘ಕನ್ನಡ ಸಾಹಿತ್ಯಕ್ಕೆ ಭದ್ರವಾದ ಬುನಾದಿ ಹಾಕಿದವರಲ್ಲಿ ಜೈನ ಕವಿಗಳಾದ ಪಂಪ, ರನ್ನ, ಪೊನ್ನ ಅವರ ಪಾತ್ರ ಮಹತ್ವದ್ದು’ ಎಂದು ಹೇಳಿದರು.
ಉಷಾರಾಣಿ ಮಹಾವೀರ್ ಮಾತನಾಡಿ, ‘ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಕೆತ್ತನೆ ಸಾಧಾರಣವಾದುದಲ್ಲ. ಶಿಲ್ಪಿಯು ಜೈನ ತೀರ್ಥಂಕರನ್ನು ಆದರ್ಶವಾಗಿಟ್ಟು ಕೊಂಡು ಕೆತ್ತನೆ ಮಾಡಿದ್ದರಿಂದಾಗಿ ಬಾಹುಬಲಿಯ ನೈಜರೂಪ ಮೂಡಿಬಂದಿದೆ’ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಿರ್ಮಲಮ್ಮ ಅವರಿಗೆ ಶ್ರೇಯೋಭದ್ರ ಪ್ರಶಸ್ತಿ ಹಾಗೂ ಡಾ.ಟಿ.ಆರ್. ಜೋಡಟ್ಟಿ ಅವರಿಗೆ ಸುಮ ವಸಂತ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.