ಬೆಂಗಳೂರು: ಆಸ್ತಿ ತೆರಿಗೆ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಪಾಲಿಕೆಯ ಬಿಜೆಪಿ ಸದಸ್ಯರು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ ನಡೆಸಿದ ಧರಣಿ ವಿಕೋಪಕ್ಕೆ ತಿರುಗಿತು. ಕಲಾಪಕ್ಕೆ ಅಡ್ಡಿಪಡಿಸಿದ ನಾಲ್ವರು ಬಿಜೆಪಿ ಸದಸ್ಯರನ್ನು ಕೌನ್ಸಿಲ್ ಸಭೆಯಿಂದ ಅಮಾನತು ಮಾಡಲಾಗಿದೆ.
ಸುಮಾರು ಅರ್ಧ ಗಂಟೆಗಳ ಕಾಲ ನಡೆದ ತಳ್ಳಾಟ–ನೂಕಾಟದಿಂದ ಇಬ್ಬರು ಮಹಿಳಾ ಸದಸ್ಯರೂ ಸೇರಿದಂತೆ ಮೂವರು ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾದವು. ಪ್ರತಿಭಟನೆಯ ಸಂದರ್ಭದಲ್ಲಿ ಅಸ್ವಸ್ಥಗೊಂಡ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಸ್ಪತ್ರೆಗೆ ದಾಖಲಾದರು.
ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿರೋಧಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ನಾಲ್ವರು ಬಿಜೆಪಿ ಸದಸ್ಯರನ್ನು ಎರಡು ತಿಂಗಳ ಮಟ್ಟಿಗೆ ಕೌನ್ಸಿಲ್ ಸಭೆಯಿಂದ ಮೇಯರ್ ಅಮಾನತು ಮಾಡಿದರು.
ಅಮಾನತುಗೊಂಡ ಬಿಜೆಪಿ ಸದಸ್ಯರು
* ಪದ್ಮನಾಭ ರೆಡ್ಡಿ, ಕಾಚರಕನಹಳ್ಳಿ ವಾರ್ಡ್ (ವಿರೋಧ ಪಕ್ಷದ ನಾಯಕ)
* ಎಂ. ನಾಗರಾಜ್, ಗಂಗೇನಹಳ್ಳಿ ವಾರ್ಡ್
* ಕೆ. ಉಮೇಶ್ ಶೆಟ್ಟಿ, ಗೋವಿಂದರಾಜನಗರ ವಾರ್ಡ್
* ಸಿ.ಆರ್. ರಾಮಮೋಹನ್ರಾಜು, ಬೊಮ್ಮನಹಳ್ಳಿ ವಾರ್ಡ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.