ADVERTISEMENT

ಬಿಸಿಯೂಟ ಯೋಜನೆಗೆ ಸಾರವರ್ಧಿತ ಅಕ್ಕಿ ಬಳಕೆ

ಅಕ್ಷಯಪಾತ್ರ ಪ್ರತಿಷ್ಠಾನದ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 20:29 IST
Last Updated 20 ಅಕ್ಟೋಬರ್ 2016, 20:29 IST

ಬೆಂಗಳೂರು: ಧಾರವಾಡ, ಬಳ್ಳಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇನ್ನು ಮುಂದೆ ಸಾರವರ್ಧಿತ ಅಕ್ಕಿಯನ್ನೂ ಸಹ ಬಳಕೆ ಮಾಡಲಾಗುತ್ತದೆ.

ಈ ಸಂಬಂಧ ಅಕ್ಷಯ ಪಾತ್ರ ಪ್ರತಿಷ್ಠಾನ ಮತ್ತು ಶಿಕ್ಷಣ ಇಲಾಖೆ ಮಧ್ಯೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ‘ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಅಪೌಷ್ಟಿಕತೆ ನಿವಾರಿಸಲು ಬಿಸಿಯೂಟಕ್ಕೆ ಬಳಸುವ ಅಕ್ಕಿ ಜೊತೆಗೆ ಸಾರವರ್ಧಿತ ಅಕ್ಕಿಯನ್ನೂ  ಬಳಸಲಾಗುವುದು’ ಎಂದು ಹೇಳಿದರು.

ಬಿಸಿಯೂಟದಲ್ಲಿ ಬಳಸುವ 99 ಕೆ.ಜಿ. ಅಕ್ಕಿ ಜೊತೆ 1 ಕೆ.ಜಿ. ಸಾರವರ್ಧಿತ ಅಕ್ಕಿ ಮಿಶ್ರಣ ಮಾಡಲಾಗುವುದು. ಒಂದು ವರ್ಷದ ನಂತರ ಮಕ್ಕಳ ದೈಹಿಕ ಬೆಳವಣಿಗೆ, ತೂಕ ಹಾಗೂ ಎತ್ತರ ಮಾಪನ ಮಾಡಲಾಗುವುದು ಎಂದು ಸಚಿವರು ಹೇಳಿದರು.

ADVERTISEMENT

ಈ ಒಪ್ಪಂದದ ಅನ್ವಯ ಮೂರು ಜಿಲ್ಲೆಗಳ 2,600 ಶಾಲೆಗಳ 4.5 ಲಕ್ಷ ಮಕ್ಕಳು ಲಾಭ ಪಡೆಯಲಿದ್ದಾರೆ. ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ ಬಳಸುವ ಯೋಜನೆಯನ್ನು  ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.

ವಿದ್ಯಾರ್ಥಿಗಳ ಗಣಿತ ಕಲಿಕಾ ಆಂದೋಲನ
ಅಕ್ಷರ ಪ್ರತಿಷ್ಠಾನದ ಸಹಯೋಗದಲ್ಲಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಕಲಿಕಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ಗದಗ ಹಾಗೂ ಧಾರವಾಡ ಜಿಲ್ಲೆಗಳ 1.29 ಲಕ್ಷ ಮಕ್ಕಳಿಗೆ ₹15.96 ಕೋಟಿ ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು  ತನ್ವೀರ್‌ ಸೇಠ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.