ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆಗಳ ರಿಪೇರಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ಈ ಕುರಿತ ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿತು.
ಈ ಸಂದರ್ಭದಲ್ಲಿ ಬಿಬಿಎಂಪಿ ಪರ ವಕೀಲರು, ನಗರದಲ್ಲಿ ಮೂರು ಮಾದರಿ ರಸ್ತೆಗಳನ್ನು ನಿರ್ಮಿಸುವ ಕುರಿತಂತೆ ನ್ಯಾಯಪೀಠಕ್ಕೆ ಜ್ಞಾಪನಾ (ಮೆಮೊ) ಪತ್ರ ಸಲ್ಲಿಸಿದರು.
ಮಾದರಿ ರಸ್ತೆಗಳು: ಕಬ್ಬನ್ ರಸ್ತೆ–ಡಿಕನ್ಸನ್ ರಸ್ತೆಯಿಂದ ಸೆಂಟ್ರಲ್ ಸ್ಟ್ರೀಟ್ ವರೆಗೆ, ರೇಸ್ ಕೋರ್ಸ್ ರಸ್ತೆ–ಚಾಲುಕ್ಯ ಹೋಟೆಲ್ನಿಂದ ಶಿವಾನಂದ ಸರ್ಕಲ್ವರೆಗೆ ಹಾಗೂ ಸ್ಯಾಂಕಿ ರಸ್ತೆ–ವಿಂಡ್ಸರ್ ಮ್ಯಾನರ್ ರಸ್ತೆಯಿಂದ ರಾಜಭವನ್ ಜಂಕ್ಷನ್ವರೆಗಿನ ಮೂರು ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ರೂಪಿಸಲಾಗುವುದು ಎಂದು ಈ ಪತ್ರದಲ್ಲಿ ವಿವರಿಸಲಾಗಿದೆ.
ಈ ರಸ್ತೆಗಳಲ್ಲಿ ಪಾದಚಾರಿ ಮಾರ್ಗ, ವಾಹನ ನಿಲುಗಡೆಯ ಸ್ಥಳ ಗಳು ಸೂಕ್ತವಾಗಿ ಇರುವಂತೆ ನೋಡಿಕೊಳ್ಳ-ಲಾಗುವುದು ಎಂದು ಹೇಳಲಾಗಿದೆ.
‘ಹದಿನೈದು ದಿನಗಳಲ್ಲಿ ಈ ಮಾದರಿ ರಸ್ತೆಗಳನ್ನು ಪೂರ್ಣ ಗೊಳಿಸುವ ದಿಸೆಯಲ್ಲಿ ಪ್ರಯತ್ನಿಸಿ. ನಗರದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ಪ್ರಮಾಣ ಇಳಿಕೆಯಾಗುವಂತೆ ಬಿಬಿಎಂಪಿಯ ಎಲ್ಲಾ ವಿಭಾಗಗಳೂ ಸರಿಯಾಗಿ ನಿಗಾ ವಹಿಸಬೇಕು. ಇದಕ್ಕಾಗಿ ಕಾಲಮಿತಿಯಲ್ಲಿ ಕೆಲಸ ಮಾಡಬೇಕು’ ಎಂದು ಪೀಠವು ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.