ಬೆಂಗಳೂರು: ಅರಮನೆ ಮೈದಾನದ ಜಯಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ಆಯೋಜನೆಯಾಗಿದ್ದ ಅಂತರರಾಷ್ಟ್ರೀಯ ವೈನ್ ಉತ್ಸವದಲ್ಲಿ ಮಳಿಗೆಯೊಂದರ ಮಾರಾಟ ಸಹಾಯಕಿ (ಸೇಲ್ಸ್ ಗರ್ಲ್) ಜತೆ ಅನುಚಿತವಾಗಿ ವರ್ತಿಸಿದ ಪಾನಮತ್ತ ಯುವಕರನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಭಾನುವಾರ ನಡೆದಿದೆ.
ಘಟನೆ ಸಂಬಂಧ ದೇವನಹಳ್ಳಿಯ ಕಿರಣ್ (28) ಮತ್ತು ಸುರೇಂದ್ರ (28) ಎಂಬುವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರವಿ ಪರಾರಿಯಾಗಿದ್ದಾನೆ ಎಂದು ಜೆ.ಸಿ.ನಗರ ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತರಾದ ಆ ಮೂವರು ಸಂಜೆ ವೈನ್ ಉತ್ಸವಕ್ಕೆ ಬಂದಿದ್ದರು. ಉತ್ಸವದಲ್ಲಿ ಮದ್ಯಪಾನ ಮಾಡಿದ್ದ ಅವರು, ಹೋಟೆಲ್ನ ಶೌಚಾಲಯದಿಂದ ಮಳಿಗೆಗೆ ಹಿಂದಿರುಗುತ್ತಿದ್ದ ಮಾರಾಟ ಸಹಾಯಕಿಯನ್ನು ಅಡ್ಡಗಟ್ಟಿ ಚುಂಬಿಸಲು ಯತ್ನಿಸಿದ್ದಾರೆ.
ಆಗ ಮಾರಾಟ ಸಹಾಯಕಿ ಪ್ರತಿರೋಧ ತೋರಿದ್ದರಿಂದ ಆರೋಪಿಗಳು, ಅವರನ್ನು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ಮಾರಾಟ ಪ್ರತಿನಿಧಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸಾರ್ವಜನಿಕರು ಕಿರಣ್ ಮತ್ತು ಸುರೇಂದ್ರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಾರು ಚಾಲಕನಾದ ರವಿ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ.
ಕಿರಣ್, ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿದ್ದಾನೆ. ಸುರೇಂದ್ರ, ವಕೀಲನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಮಾರು 17 ವರ್ಷದ ಆ ಮಾರಾಟ ಸಹಾಯಕಿಗೆ ಘಟನೆ ವೇಳೆ ತರಚಿದ ಗಾಯಗಳಾಗಿವೆ. ಬಂಧಿತರ ವಿರುದ್ಧ ಹಲ್ಲೆ, ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪ ಹಾಗೂ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೌಡ್ಡಿಪಟ್ಟಿ
‘ಪ್ರಕರಣದ ಗಂಭೀರತೆಯನ್ನು ಆಧರಿಸಿ ಕಿರಣ್ ಮತ್ತು ಸುರೇಂದ್ರನನ್ನು ಜೆ.ಸಿ.ನಗರ ಪೊಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿಸಲಾಗಿದೆ. ಅವರ ಮೇಲೆ ನಿರಂತರ ಕಣ್ಗಾವಲು ಇಡಲಾಗುತ್ತದೆ’
–ಸಂದೀಪ್ ಪಾಟೀಲ್
ಉತ್ತರ ವಿಭಾಗದ ಡಿಸಿಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.