ADVERTISEMENT

ಯೋಗ ವಿಜ್ಞಾನ: 50 ಲಕ್ಷ ಡಾಲರ್ ಯೋಜನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2013, 6:05 IST
Last Updated 1 ಮಾರ್ಚ್ 2013, 6:05 IST

ಯಲಹಂಕ: ಪಾಶ್ಚಿಮಾತ್ಯ ದೇಶದ ವೈಜ್ಞಾನಿಕ ಅನ್ವೇಷಣೆಯೊಂದಿಗೆ ಭಾರತೀಯ ಯೋಗ ವಿಜ್ಞಾನ ಸಮ್ಮಿಲನವಾದಲ್ಲಿ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೋಗ ವಿಶ್ವವಿದ್ಯಾಲಯದ (ಡೀಮ್ಡ) ಅಂತರರಾಷ್ಟ್ರೀಯ ಸಂಚಾಲಕ ಎನ್.ವಿ.ರಘುರಾಮ್ ಅಭಿಪ್ರಾಯಪಟ್ಟರು.

ಉಪನಗರ 2ನೇ ಹಂತದ `ಎ' ಸೆಕ್ಟರ್‌ನಲ್ಲಿ ಯೋಗ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಈ ನಿಟ್ಟಿನಲ್ಲಿ ಮೊದಲ ಹಂತದ ಪ್ರಯೋಗ ಆರಂಭವಾಗಿದ್ದು, 50 ಲಕ್ಷ ಡಾಲರ್ ಯೋಜನೆಯೊಂದು ಸದ್ಯದಲ್ಲೆ ಅಸ್ತಿತ್ವಕ್ಕೆ ಬರಲಿದೆ.

ಇದರಿಂದ ಯೋಗದ ವಿವಿಧ ವಿಭಾಗಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಕನಸನ್ನು ನನಸುಗೊಳಿಸುವ ಸಮಯ ಹತ್ತಿರವಾಗುತ್ತಿದೆ ಎಂದೆನಿಸುತ್ತಿದೆ' ಎಂದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ರಾಮಕೃಷ್ಣ ಮಾತನಾಡಿ, ಇಂದಿನ ಪರಿಸರವನ್ನು ಗಮನಿಸಿದರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಯೋಗ ಅತ್ಯವಶ್ಯಕವೆನಿಸಿದೆ ಎಂದರು.

`ಉಪಾಧ್ಯಾಯರು ಮಕ್ಕಳನ್ನು ನಿಯತ್ರಿಸುವುದೆ ಕಷ್ಟವಾಗುತ್ತಿದ್ದು, ಮತ್ತೊಂದೆಡೆ ಪೋಷಕರು ತಮ್ಮ ಹುದ್ದೆ ಮತ್ತು ಸಮಸ್ಯೆಗಳ ನಡುವೆ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದಾರೆ.

ಈ ದಿಸೆಯಲ್ಲಿ ಎಲ್ಲ ಕಡೆಗಳಲ್ಲಿ ಯೋಗ ತರಗತಿಗಳನ್ನು ವಿಸ್ತರಿಸುವ ಮೂಲಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜವನ್ನು ಕಟ್ಟಬೇಕಾಗಿದೆ' ಎಂದು ಅವರು ಹೇಳಿದರು.

ಯೋಗ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಯೋಗವನ್ನು ವೈಜ್ಞಾನಿಕವಾಗಿ ಕಲಿಸುವುದು ಮತ್ತು ಎಲ್ಲಡೆ ಹರಡುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಜೀವನವನ್ನು ಸಮಗ್ರ ಚಿಕಿತ್ಸೆಯಿಂದ ಆರೋಗ್ಯಮಯ ಮತ್ತು ಆನಂದಮಯವಾಗಿಸುವುದು ಯೋಗ ವಿಜ್ಞಾನ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು  ತಿಳಿಸಿದರು.

ಯೋಗ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಸಿಂಗ್ಲಾಚಾರ್, ಕಾರ್ಯದರ್ಶಿ ಬಿ.ಎ.ಶ್ರೀಕಾಂತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.