ADVERTISEMENT

ರಂಜಾನ್ ಪ್ರಯುಕ್ತ ಮುಸ್ಲಿಮರಿಗೆ ಪಡಿತರ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಎಚ್.ಡಿ.ದೇವೇಗೌಡ ಅವರು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪಡಿತರ ಕಿಟ್‌ಗಳನ್ನು ನೀಡಿದರು. ಪಕ್ಷದ ಮುಖಂಡ ವಿ.ಕೆ.ಗೋಪಾಲ್ ಅವರು ಇದ್ದಾರೆ
ಎಚ್.ಡಿ.ದೇವೇಗೌಡ ಅವರು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪಡಿತರ ಕಿಟ್‌ಗಳನ್ನು ನೀಡಿದರು. ಪಕ್ಷದ ಮುಖಂಡ ವಿ.ಕೆ.ಗೋಪಾಲ್ ಅವರು ಇದ್ದಾರೆ   

ಬೆಂಗಳೂರು: ರಂಜಾನ್ ಪ್ರಯುಕ್ತವಾಗಿ  ಜೆಡಿಎಸ್‌ನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10ಸಾವಿರ ಮುಸ್ಲಿಮರಿಗೆ ಪಡಿತರ ಕಿಟ್‌ಗಳನ್ನು ವಿತರಿಸಲಾಯಿತು.

ಜೆಡಿಎಸ್ ರಾಷ್ಟ್ರ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಡಿತರ ವಿತರಣೆ ಕಾರ್ಯ ನಡೆಯಿತು.

ಎಚ್.ಡಿ.ದೇವೇಗೌಡ ಅವರು ಮಾತನಾಡಿ, ‘ರಾಜಕೀಯ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಹಿಂದೂ ಮುಸ್ಲಿಮರ ಬಾಂಧವ್ಯದ ಸಂಕೇತವಾಗಿ ಹಾಗೂ ಬಡತನದಲ್ಲಿರುವ ಮುಸ್ಲಿಮರು ಖುಷಿಯಿಂದ ರಂಜಾನ್ ಆಚರಿಸಲು ಸಹಾಯಕವಾಗುವಂತೆ ಪಡಿತರ ವಿತರಣೆ ಮಾಡಲಾಗಿದೆ’ ಎಂದರು.

ADVERTISEMENT

ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ‘ರೈತರ ಸಾಲ ಮನ್ನಾ ಮಾಡಿರುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಆದರೆ, ಸಣ್ಣ ಹಾಗೂ ಅತಿ ಸಣ್ಣ ರೈತರ ಸಾಲವನ್ನು ಮಾತ್ರ ಮನ್ನಾ ಮಾಡದೇ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ನಗರದಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ‘ಮನೆ ಮನೆಗೆ ಕುಮಾರಣ್ಣ’ ಪಾದಯಾತ್ರೆ ಅಭಿಯಾನದ ರೀತಿಯೇ 198 ವಾರ್ಡ್‌ಗಳಲ್ಲೂ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಜನರ ಕುಂದುಕೊರತೆ ಆಲಿಸಲು ‘ವಾರ್ಡ್ ಮಟ್ಟದ ಸಂವಾದ’ ಕಾರ್ಯಕ್ರಮವನ್ನು ಮುಂದಿನ ವಾರದಿಂದ ನಡೆಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.