ADVERTISEMENT

‘ರೈತರ ಕೆಲಸ ವಿಳಂಬವಾದರೆ ತಹಶೀಲ್ದಾರ್ ವಿರುದ್ಧ ಹೋರಾಟ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:32 IST
Last Updated 17 ನವೆಂಬರ್ 2017, 20:32 IST
ಭೀಮಯ್ಯ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್‌.ಕೆ.ಆನಂದ್‌, ಡಿ.ಎಸ್‌.ವಿಜಯಕುಮಾರ್‌, ಕೇಶವಮೂರ್ತಿ ಇದ್ದಾರೆ
ಭೀಮಯ್ಯ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್‌.ಕೆ.ಆನಂದ್‌, ಡಿ.ಎಸ್‌.ವಿಜಯಕುಮಾರ್‌, ಕೇಶವಮೂರ್ತಿ ಇದ್ದಾರೆ   

ನೆಲಮಂಗಲ: ‘ರೈತರ ಜಮೀನಿಗೆ ಸಂಬಂಧ ಪಟ್ಟ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲವಾದರೆ, ತಹಶೀಲ್ದಾರ್ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ರಾಷ್ಟ್ರೀಯ ಕಿಸಾನ್‌ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಡಿ.ಎಸ್‌.ವಿಜಯಕುಮಾರ್‌ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಬಳಿಯ ನೇತಾಜಿ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನ ಕೆಲ ರೈತರ ಜಮೀನಿಗೆ ಈಗಾಗಲೇ ಸಾಗುವಳಿ ಪತ್ರ ನೀಡಿದ್ದಾರೆ. ಆದರೆ, ಜಮೀನನ್ನು ಅವರ ಹೆಸರಿಗೆ ನೋಂದಾಯಿಸಲು ಅಧಿಕಾರಿಗಳು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕೆಲ ಭೂ ವ್ಯಾಜ್ಯ ಪ್ರಕರಣಗಳಲ್ಲಿ ರೈತರ ಪರವಾಗಿ ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಕಚೇರಿಗಳಲ್ಲಿ ಕಡ
ತಗಳು ಕಳೆದು ಹೋಗಿರುವುದಕ್ಕೆ ಮತ್ತು ನಾಶವಾಗಿರುವುದಕ್ಕೆ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು’ ಎಂದು ಸಂಘಟನೆ ಉಪಾಧ್ಯಕ್ಷ ಭೀಮಯ್ಯ ಹೇಳಿದರು.

ಸಂಘಟನೆ ಕಾರ್ಯಾಧ್ಯಕ್ಷ ಎಸ್‌.ಕೆ.ಆನಂದ್‌, ‘ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಶಿರಸ್ತೇದಾರರು, ಕಂಪ್ಯೂಟರ್‌ ಸಿಬ್ಬಂದಿಗಳು ಜನರಿಂದ ಹಣ ವಸೂಲಿ ಮಾಡಲು ಬೇಕಂತಲೆ ತಪ್ಪುಗಳನ್ನು ಮಾಡುತ್ತಿದ್ದಾರೆ. ಆ ತಪ್ಪುಗಳನ್ನು ಸರಿಪಡಿಸಲು ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.