ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ದುಷ್ಕರ್ಮಿಗಳಿಬ್ಬರು, ಮಹದೇವ (36) ಎಂಬುವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಕಲಬುರ್ಗಿಯ ಮಹದೇವ ಹಾಗೂ ಅವರ ಪತ್ನಿ ಹೊನ್ನಮ್ಮ ಎರಡು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಜ್ಞಾನಭಾರತಿ ಬಳಿಯ ಉಲ್ಲಾಳದಲ್ಲಿ ವಾಸವಿದ್ದರು. ಇತ್ತೀಚೆಗೆ ಊರಿಗೆ ಹೋಗಿದ್ದ ದಂಪತಿ, ರೈಲಿನಲ್ಲಿ ಭಾನುವಾರ ಬೆಳಿಗ್ಗೆ ನಗರಕ್ಕೆ ವಾಪಸ್ ಬಂದಿದ್ದರು. ರೈಲಿನಿಂದ ಇಳಿಯುತ್ತಿದ್ದಂತೆ ಮಹದೇವ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.
ತೀವ್ರ ಗಾಯಗೊಂಡಿರುವ ಮಹದೇವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಮ್ಮ ನೀಡಿರುವ ದೂರಿನಡಿ ಕೊಲೆಗೆ ಯತ್ನ ಆರೋಪದಡಿ ಆರ್ಎಂಸಿ ಯಾರ್ಡ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
‘ಮಹದೇವ ಹಾಗೂ ಹೊನ್ನಮ್ಮ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅದಕ್ಕೆ ಹೊನ್ನಮ್ಮ ಮನೆಯವರಿಂದ ವಿರೋಧವಿತ್ತು. ಅದೇ ಕಾರಣಕ್ಕೆ ಸಂಬಂಧಿಗಳಾದ ಬಸವರಾಜು ಹಾಗೂ ಹನುಮಂತ ಎಂಬುವರು ಈ ಕೃತ್ಯ ಎಸಗಿರಬಹುದು ಎಂಬ ಅನುಮಾನವಿದೆ. ತಲೆಮರೆಸಿಕೊಂಡಿರುವ ಅವರಿಬ್ಬರಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಲಬುರ್ಗಿಯಿಂದ ಶನಿವಾರ ರಾತ್ರಿ ಹೊರಟಿದ್ದ ರೈಲಿನ ಒಂದು ಬೋಗಿಯಲ್ಲಿ ದಂಪತಿ ಇದ್ದರು. ಇನ್ನೊಂದು ಬೋಗಿಯಲ್ಲೇ ದುಷ್ಕರ್ಮಿಗಳಿದ್ದರು ಎಂಬ ಮಾಹಿತಿ ಸಿಕ್ಕಿದೆ. ರಕ್ತಸಿಕ್ತವಾಗಿ ಬಿದ್ದ ಪತಿಯ ಎದುರು ಗೋಳಾಡುತ್ತಿದ್ದ ಪತ್ನಿಯು ರಕ್ಷಣೆಗಾಗಿ ಕೂಗಾಡಿದ್ದರು. ಅದನ್ನು ನೋಡಿದ ಕೆಲ ಪ್ರಯಾಣಿಕರು, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.