ADVERTISEMENT

ಲೋಕಾಯುಕ್ತರ ವರ್ತನೆಗೆ ಶೆಟ್ಟರ್‌ ಆಕ್ಷೇಪ

ರಾಜೀನಾಮೆ ಕೊಡದೆ ಭಾಸ್ಕರ ರಾವ್ ದೀರ್ಘ ರಜೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:37 IST
Last Updated 30 ಜುಲೈ 2015, 19:37 IST

ಬೆಂಗಳೂರು: ಮಗ ಅಶ್ವಿನ್‌ ರಾವ್‌ ಬಂಧನದ ನಂತರ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್‌, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ನಡೆದ ಲೋಕಾ ಯುಕ್ತ ಕಾಯ್ದೆ  ತಿದ್ದುಪಡಿ ಮೇಲಿನ ಚರ್ಚೆ ಸಂದರ್ಭದಲ್ಲಿ ಅವರು ಮಾತನಾಡಿದರು. ‘ಮಗನ ಬಂಧನದ ನಂತರ ರಾಜೀನಾಮೆ ನೀಡುವ ಬದಲು ಲೋಕಾಯುಕ್ತರು ದೀರ್ಘ ರಜೆ ಮೇಲೆ ಹೋಗಿದ್ದಾರೆ. ಈ ಅವಧಿಯಲ್ಲಿ ಲೋಕಾ ಯುಕ್ತ ಸಂಸ್ಥೆಯನ್ನು ಮುನ್ನಡೆಸುವವರು ಯಾರು’ ಎಂದು ಶೆಟ್ಟರ್‌ ಪ್ರಶ್ನಿಸಿದರು.

‘ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯದ್‌  ರಿಯಾಜ್‌ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಂಡಿಲ್ಲ. 48 ಗಂಟೆಗಳ ಕಾಲ ಪೊಲೀಸ್‌ ವಶದಲ್ಲಿದ್ದ ಅಂತಹ ಅಧಿಕಾರಿಯನ್ನು ಅಮಾನತು ಮಾಡ ಬೇಕಾಗುತ್ತದೆ. ಆದರೆ, ಅಂತಹ ತೀರ್ಮಾನ ಸರ್ಕಾರದ ಕಡೆಯಿಂದ ಆಗಿಲ್ಲ’ ಎಂದು ಅವರು ದೂರಿದರು.

ಲೋಕಾಯುಕ್ತರ ವ್ಯಾಪ್ತಿಗೆ: ದಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯೆ ನೀಡಿ ‘ರಿಯಾಜ್‌ ಅವರು ಲೋಕಾಯುಕ್ತ ಅಧಿಕಾರಿ. ಅವರ ವಿರುದ್ಧ ಕ್ರಮ ಜರುಗಿ ಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಲೋಕಾ ಯುಕ್ತರೇ ಕ್ರಮ ಜರುಗಿಸಬೇಕು’ ಎಂದು ಸಮಜಾಯಿಷಿ ನೀಡಿದರು. ‘ಇಂತಹ ಅವಾಂತರಗಳು ಆಗದಂತೆ ನೋಡಿಕೊಳ್ಳುವುದಕ್ಕೂ ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸಬೇಕು. ಲೋಕಾಯುಕ್ತರು ದಿಢೀರ್‌ ಎಂದು ರಜೆ ಹಾಕಿ ಹೋಗುವುದು; ರಜೆ ಮೇಲಿದ್ದರೂ ಕಡತಗಳನ್ನು ‘ವ್ಯವಹಾರ’ ಸಲುವಾಗಿ ಮನೆಗೆ ತರಿಸಿಕೊಂಡು ಕ್ರಮ ಜರುಗಿಸು ವುದಕ್ಕೂ ಕಡಿವಾಣ ಹಾಕುವ ಹಾಗೆ ತಿದ್ದುಪಡಿ ಮಾಡಬೇಕು’ ಎಂದು ಶೆಟ್ಟರ್‌ ಸಲಹೆ ನೀಡಿದರು.
*
ಇದೊಂದು ಪ್ರಮುಖ ತಿದ್ದುಪಡಿ. ಹೀಗಾಗಿ ಅದರ ಸಮಗ್ರ ಅಧ್ಯಯನಕ್ಕೆ ಜಂಟಿ ಸದನ ಪರಿಶೀಲನಾ ಸಮಿತಿಗೆ ಒಪ್ಪಿಸಿ. ಅಧ್ಯಯನದ ನಂತರ ಮತ್ತೆ ಸದನ ಸೇರಿ ತಿದ್ದುಪಡಿ ಬಗ್ಗೆ ಚರ್ಚೆ ನಡೆಸೋಣ.
-ಜಗದೀಶ ಶೆಟ್ಟರ್,
ವಿರೋಧಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.