ADVERTISEMENT

ವಿದ್ಯುತ್ ಪ್ರವಹಿಸಿ ಬಾಲಕಿ ಸಾವು

ಬೆಸ್ಕಾಂ ನಿರ್ಲಕ್ಷ್ಯ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:48 IST
Last Updated 17 ಸೆಪ್ಟೆಂಬರ್ 2014, 19:48 IST

ಬೆಂಗಳೂರು: ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಂತಿ ಮುಟ್ಟಿ ಆನಂದಿ (8) ಎಂಬ ಬಾಲಕಿ ಮೃತಪಟ್ಟಿರುವ ಘಟನೆ ಕಲಾಸಿಪಾಳ್ಯ ಸಮೀಪದ ಎಂ.ಎಸ್.-ಬಿಲ್ಡಿಂಗ್‌ ವಸತಿ ಸಮುಚ್ಚಯದಲ್ಲಿ ಬುಧವಾರ ರಾತ್ರಿ ನಡೆದಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ಬಾಲಕಿಯ ಸಾವಿಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದರು.

ತಮಿಳುನಾಡು ಮೂಲದ ಕೃಷ್ಣ ಮತ್ತು ಜಯಂತಿ ಎಂಬ ದಂಪತಿಯ ಮಗಳಾದ ಆನಂದಿ, ಚಾಮರಾಜ-ಪೇಟೆಯ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಟ್ಯೂಷನ್‌ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದ ಆಕೆ, ತಂಗಿ ಕೀರ್ತನಾ ಜತೆ ಸಮು-ಚ್ಚಯದ ಆವರಣದಲ್ಲಿ ಆಟವಾಡು-ತ್ತಿದ್ದಳು.

ವಿದ್ಯುತ್‌ ಕಂಬದ ತಂತಿ ತುಂಡಾಗಿ ರಸ್ತೆ ಮೇಲೆ ಬಿದ್ದಿತ್ತು. ಆನಂದಿ ಆ ತಂತಿಯನ್ನು ಮುಟ್ಟಿದ್ದರಿಂದ ವಿದ್ಯುತ್‌ ಪ್ರವಹಿಸಿದೆ. ಕುಸಿದು ಬಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ವಾಣಿ ವಿಲಾಸ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿರು-ವುದನ್ನು ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಕಿಯ ಪೋಷಕರು, ಕುಟುಂಬ ಸದಸ್ಯರು ಹಾಗೂ ಸಮುಚ್ಚಯದ ಇತರೆ ನಿವಾಸಿಗಳು ಪ್ರತಿಭಟನೆ ನಡೆಸಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ತಂತಿ ತುಂಡಾಗಿ ಬಿದ್ದಿ-ರುವ ಬಗ್ಗೆ ಸೆ.1 ಹಾಗೂ ಸೆ.15ರಂದು ಬೆಸ್ಕಾಂಗೆ ದೂರು ನೀಡಿದ್ದೆವು. ಆದರೆ, ಯಾವೊಬ್ಬ ಸಿಬ್ಬಂದಿಯೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿಲ್ಲ’ ಎಂದು ಆರೋಪಿಸಿದರು.

‘ಘಟನೆ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.