ADVERTISEMENT

‘ವಿಶ್ವಕರ್ಮ ಸಮುದಾಯದ ರಾಜಕೀಯ ದುರ್ಬಳಕೆ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
‘ವಿಶ್ವಕರ್ಮ ಸಮುದಾಯದ ರಾಜಕೀಯ ದುರ್ಬಳಕೆ’
‘ವಿಶ್ವಕರ್ಮ ಸಮುದಾಯದ ರಾಜಕೀಯ ದುರ್ಬಳಕೆ’   

ಬೆಂಗಳೂರು: ‘ಕಾಂಗ್ರೆಸ್‌ನವರು ವಿಶ್ವಕರ್ಮ ಸಮುದಾಯವನ್ನು ಬಳಸಿಕೊಂಡು, ಬಳಿಕ ಪೇಪರ್‌ನಂತೆ ಬಿಸಾಡಿದರು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಕಿಡಿಕಾರಿದರು.

ಅರೆಕೆರೆಯ ವಿಶ್ವಕರ್ಮ ಸಮುದಾಯ ಸಂಘವು ಭಾನುವಾರ ಇಲ್ಲಿ ಆಯೋಜಿಸಿದ್ದ ‘4ನೇ ವರ್ಷದ ವಿಶ್ವಕರ್ಮ ಜಯಂತ್ಯುತ್ಸವ’ದಲ್ಲಿ ಅವರು ಮಾತನಾಡಿದರು.

‘ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದಾಗಿ ಕಾಂಗ್ರೆಸ್‌ ಪಕ್ಷ ಭರವಸೆ ನೀಡಿತ್ತು. ಆದರೆ, ಸಮಾಜವನ್ನು ನಿರ್ಲಕ್ಷ್ಯ ಮಾಡಿತ್ತು. ಇದರಿಂದ ಬೇಸರಗೊಂಡು ಆ ಪಕ್ಷದಿಂದ ಹೊರಗೆ ಬಂದೆ. ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿಗೆ ಆಹ್ವಾನಿಸಿದ್ದರು. ಸಮುದಾಯದ ಹಿತದೃಷ್ಟಿಯಿಂದಾಗಿ ಬಿಜೆಪಿಗೆ ಸೇರ್ಪಡೆಗೊಂಡೆ’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ನಮ್ಮ ಸಮುದಾಯ ಮಾತ್ರವೇ ಪಂಚಕಸುಬು ಮಾಡುತ್ತಿದೆ. ಉಳಿದ ಯಾವುದೇ ಸಮಾಜ ಈ ಕಸುಬು ಮಾಡುತ್ತಿಲ್ಲ. ರಾಜ್ಯದಲ್ಲಿ ನಮ್ಮ ಸಮುದಾಯದ 35 ಲಕ್ಷ ಮಂದಿ ಇದ್ದಾರೆ. ಎಲ್ಲರೂ ಸಂಘಟಿತರಾಗಿ ಶಕ್ತಿ ಪ್ರದರ್ಶಿಸಬೇಕಿದೆ’ ಎಂದರು.

ಸಂಘದ ಅಧ್ಯಕ್ಷ ಜೆ.ಲೋಕೇಶ್‌, ‘ಅರೆಕೆರೆ ಭಾಗದಲ್ಲಿರುವ ವಿಶ್ವಕರ್ಮ ಸಮುದಾಯದವರನ್ನು ಸಂಘಟಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ವೀರಗಾಸೆ, ಕೀಲು ಕುದುರೆ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.