ADVERTISEMENT

ಶಕ್ತಿ ಕೇಂದ್ರದಲ್ಲೇ ಅವ್ಯವಸ್ಥೆ: ರೋಷನ್‌ಬೇಗ್‌

ವಿಧಾನಸೌಧ, ವಿಕಾಸಸೌಧದಲ್ಲಿ ನಿರ್ವಹಣೆ ಕೊರತೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 20:26 IST
Last Updated 24 ಏಪ್ರಿಲ್ 2014, 20:26 IST

ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳಲ್ಲಿನ ಅವ್ಯವಸ್ಥೆ ಮತ್ತು ನಿರ್ವಹಣೆ ಬಗ್ಗೆ ಸ್ವತಃ ವಾರ್ತಾ ಸಚಿವ ಆರ್‌. ರೋಷನ್‌ಬೇಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಈ ಎರಡು ಕಟ್ಟಡಗಳ ಆವರಣ ಎಲ್ಲ ದೃಷ್ಟಿಕೋನದಿಂದಲೂ ಮಾದರಿ ಯಾಗಿರಬೇಕು. ಈ ನಿಟ್ಟಿನಲ್ಲಿ ಅಗತ್ಯ ಸುಧಾರಣೆ ಕ್ರಮಗಳನ್ನು ಕೈಗೊಂಡು ಕಟ್ಟಡಗಳ ಸೌಂದರ್ಯ ಕಾಪಾಡಬೇಕು ಎಂದು ತಿಳಿಸಿದ್ದಾರೆ.

ಈ ಕಟ್ಟಡಗಳ ಕಾರಿಡಾರ್‌ನಲ್ಲಿ ಅನುಪಯುಕ್ತ ಪೀಠೋಪಕರಣಗಳನ್ನು ಇಡಲಾಗಿದೆ. ಇಂತಹ ಪೀಠೋಪಕರಣಗಳು ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಸಾರ್ವಜನಿಕರ ಉಪಯೋಗಕ್ಕೆ ಇಟ್ಟಿರುವ ಕುರ್ಚಿಗಳು ತುಂಬಾ ಹಳೆಯದಾಗಿವೆ. ಉತ್ತಮ ಗುಣಮಟ್ಟದ ಹೊಸದಾದ ಸುಂದರ ಕುರ್ಚಿಗಳನ್ನು ಅಳವಡಿಸುವುದರಿಂದ ಕಟ್ಟಡದ ಸೌಂದರ್ಯ ಹೆಚ್ಚುತ್ತದೆ ಮತ್ತು ಸಾರ್ವಜನಿಕರಿಗೂ ಉಪಯೋಗವಾಗುತ್ತದೆ. ಅಗತ್ಯವಿರುವ ಸ್ಥಳಗಳಲ್ಲಿ ಒಂದೇ ಮಾದರಿಯ ಕುರ್ಚಿಗಳನ್ನು ಅಳವಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಬೀದಿ ನಾಯಿಗಳಿಂದ ಮುಕ್ತಿ ನೀಡಿ’
ವಿಧಾನಸೌಧ ಮತ್ತು ವಿಕಾಸಸೌಧದ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಂಜೆ ನಂತರ ನೆಲ ಮಹಡಿಯ ಬ್ಯಾಂಕ್ವೆಟ್‌ ಸಭಾಂಗಣದ ಬಳಿಯೂ ನಾಯಿಗಳ ಹಾವಳಿ ಕಂಡು ಬಂದಿದೆ. ಈ ಸಭಾಂಗಣವನ್ನು ‘ನಾಯಿಗಳ ಸಮಿತಿ’ಗೆ ನಿರ್ಮಿಸಲಾಗಿದೆಯೇನೋ ಎನ್ನುವ ಭಾವನೆ ಮೂಡುತ್ತದೆ ಎಂದು ಸಚಿವ ರೋಷನ್‌ ಬೇಗ್‌  ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT