ADVERTISEMENT

ಸಕ್ಕರೆಯ ಅತಿ ಸೇವನೆ ಕಾಯಿಲೆಗಳ ಮೂಲ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:44 IST
Last Updated 22 ಜನವರಿ 2017, 19:44 IST
ಸಕ್ಕರೆಯ ಅತಿ ಸೇವನೆ ಕಾಯಿಲೆಗಳ ಮೂಲ
ಸಕ್ಕರೆಯ ಅತಿ ಸೇವನೆ ಕಾಯಿಲೆಗಳ ಮೂಲ   

ಬೆಂಗಳೂರು: ಸಕ್ಕರೆ ಅಂಶ ಹೆಚ್ಚಾಗಿ ಸೇವಿಸುವುದೇ ಹಲವಾರು ಕಾಯಿಲೆಗಳಿಗೆ ಮೂಲ ಎಂದು ಪೌಷ್ಠಿಕಾಂಶ ತಜ್ಞ ಡಾ.ಖಾದರ್‌ ತಿಳಿಸಿದರು.
ರೋಟರಿ ಕ್ಲಬ್‌ ಆಫ್‌ ಯಲಹಂಕ ಹಾಗೂ ಜೀವನ್‌ ಆರ್ಗ್ಯಾನಿಕ್‌ ಸಂಸ್ಥೆಯ ಸಹಯೋಗದೊಂದಿಗೆ ಯಲಹಂಕದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯಗಳ  ಮೇಳದಲ್ಲಿ ಅವರು ‘ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಪಾತ್ರ’ ಕುರಿತು ಉಪನ್ಯಾಸ ನೀಡಿದರು.

‘ಕಳೆದ 50 ವರ್ಷಗಳಲ್ಲಿ   ಅಸಹಜ ಜೀವನಶೈಲಿ ಹೆಚ್ಚಿದೆ.  ಮಧುಮೇಹ, ರಕ್ತದೊತ್ತಡ, ಥೈರಾಯ್ಡ್‌, ಕ್ಯಾನ್ಸರ್‌ನಂತಹ ಕಾಯಿಲೆಗಳ ಪ್ರಮಾಣ ಹೆಚ್ಚಳವಾಗಿರುವುರು ಇದಕ್ಕೆ ನಿದರ್ಶನ. ಪ್ರಪಂಚದಲ್ಲಿ  ಶೇಕಡಾ 25ರಷ್ಟು ಜನರು ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ’  ಎಂದರು.

‘ಈ ಕಾಯಿಲೆಗಳು  ಸಹಜವಾಗಿ ಬರುವುದಿಲ್ಲ.  ವಾಣಿಜ್ಯೀಕರಣ ಮತ್ತು ಆಡಳಿತಾತ್ಮಕ  ನಿರ್ಧಾರಗಳ  ಹು ನ್ನಾರಗಳಿಂದ ಬಂದಿರುವ  ರೋಗಗಳಿವು. ಕೀಟನಾಶಕ, ರಸಗೊಬ್ಬರ ಹಾಗೂ ಔಷಧ ಕಂಪನಿಗಳು ತಯಾರಿಸಿದ ಕೃತಕ ಪದಾರ್ಥಗಳ ಸೇವನೆಯಿಂದ   ನಮ್ಮೆಲ್ಲರಲ್ಲಿ ಇಂತಹ  ಭಯಾನಕ ರೋಗಗಳು ಹೆಚ್ಚುತ್ತಿವೆ’ ಎಂದು ವಿವರಿಸಿದರು.

ADVERTISEMENT

‘ಸಾಂಪ್ರದಾಯಿಕ ಆಹಾರ ಕ್ರಮಗಳನ್ನು ಮತ್ತೆ ರೂಪಿಸಿಕೊಳ್ಳು ವುದರಲ್ಲಿ  ನಮ್ಮ ಆರೋಗ್ಯ ಅಡಗಿದೆ.  ಮುಂದಿನ ಪೀಳಿಗೆಗಳ ಭವಿಷ್ಯವೂ ಇದರ ಮೇಲೆಯೇ ಅವಲಂಬಿತವಾಗಿದೆ.    ಸಿರಿಧಾನ್ಯಗಳಾದ ಕೊರ್ಲೆ, ನವಣೆ ಅಕ್ಕಿ, ಆರ್ಕಾ ಮತ್ತಿತರ  ಪದಾರ್ಥಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಅನೇಕ ರೋಗಗಳು ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತವೆ.  ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಿರಿಧಾನ್ಯ  ಸಹಕಾರಿ’ ಎಂದು  ಸಲಹೆ ನೀಡಿದರು.

ನಮ್ಮ ಜೀವನ ನಮ್ಮ ಹಿಡಿತದಲ್ಲಿ ಇರಬೇಕೇ ಹೊರತು, ಖಾಸಗಿ ಕಂಪನಿಗಳು ನಮ್ಮ ಬದುಕನ್ನು ನಿರ್ಧಾರ ಮಾಡುವಂತಾಗಬಾರದು
ಡಾ.ಖಾದರ್‌ , ಪೌಷ್ಠಿಕಾಂಶ ತಜ್ಞ

ಸಿರಿಧಾನ್ಯ ಮಳಿಗೆಗಳಿಗೆ ಮುಗಿಬಿದ್ದ ಜನ

ತಾರಸಿ ತೋಟ, ಸಿರಿಧಾನ್ಯಗಳ ತಿಂಡಿ–ತಿನಿಸುಗಳು, ಅಕ್ಕಿ–ಬೇಳೆ ಕಾಳುಗಳು, ಗೋವಿನ ಉತ್ಪನ್ನಗಳು, ಗಾಣದಿಂದ ತೆಗೆದ ಎಣ್ಣೆಗಳು, ಸಾವ ಯವ ಗೊಬ್ಬರಗಳು ಸೇರಿದಂತೆ ಸುಮಾರು 40 ಮಳಿಗೆಗಳು ಮೇಳದಲ್ಲಿದ್ದವು. ಸಿರಿಧಾನ್ಯ ಮಳಿಗೆಯಲ್ಲಿ ಜನರು ಮುಗಿಬಿದ್ದು, ನವಣೆ, ಆರ್ಕಾ, ಊದಲು, ಸಾಮೆ, ಬರಗು, ಕೊರ್ಲು, ರವೆ, ರೊಟ್ಟಿಹಿಟ್ಟು ಮತ್ತಿತರ ಪದಾರ್ಥಗಳನ್ನು ಖರೀದಿಸಿದರು.
ಆಹಾರ ಮಳಿಗೆಯಲ್ಲಿಯೂ ಸಿರಿಧಾನ್ಯಗಳಿಂದ ತಯಾರಿಸಿದ ದೋಸೆ, ಇಡ್ಲಿ, ಬೇಳೆಬಾತ್‌, ಕಿಚ್‌ಡಿ, ಮೊಸರನ್ನ ಮತ್ತಿತರ ಆ ಹಾರಗಳ ರುಚಿಯನ್ನು ಸವಿದರು. ಅಲ್ಲದೆ ನವಣೆ  ಪಾನೀಯ ಕುಡಿದು ದಣಿವಾರಿಸಿಕೊಂಡರು. ರಾಗಿ ಕೇಕ್‌, ಸಿರಿಧಾನ್ಯದಿಂದ ತಯಾರಿಸಿದ ಕೇಕ್‌, ಚಿಪ್‌್ಸ ಮತ್ತಿತರ ಬೇಕರಿ ಪದಾರ್ಥಗಳ ವ್ಯಾಪಾರದ ಭರಾಟೆಯೂ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.