ADVERTISEMENT

‘ಸಣ್ಣ– ಮಧ್ಯಮ ಆಸ್ಪತ್ರೆಗಳ ಸ್ಥಿತಿಗತಿಯ ಅಧ್ಯಯನ ನಡೆಸಬೇಕಿತ್ತು’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:57 IST
Last Updated 18 ನವೆಂಬರ್ 2017, 19:57 IST

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ರೂಪಿಸುವುದಕ್ಕೆ ಮೊದಲು ರಾಜ್ಯದಲ್ಲಿರುವ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಬೇಕಿತ್ತು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪ್ರೊ.ಬಿ.ಕೆ.ಚಂದ್ರಶೇಖರ್‌ ಹೇಳಿದ್ದಾರೆ.

ಯಾವುದೇ ಮಸೂದೆಯು ವಿಧಾನಮಂಡಲದಲ್ಲಿ ಅಂಗೀಕಾರ ಆಗುವುದಕ್ಕೆ ಮೊದಲು ಸಾರ್ವಜನಿಕರ ಮಧ್ಯೆ ಸಮಗ್ರ ಚರ್ಚೆಯೂ ಆಗಬೇಕು. ಶೇ 90 ರಷ್ಟು ಜನರ ಒಪ್ಪಿಗೆ ಪಡೆದರೆ ಅಂತಹ ಮಸೂದೆ ಅರ್ಥಪೂರ್ಣವಾಗುತ್ತದೆ. ಖಾಸಗಿ ಆಸ್ಪತ್ರೆಗಳ ಮಸೂದೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಅವರಿಗೆ ವಹಿಸಿದ್ದರೆ, ಇಷ್ಟು ರಾದ್ಧಾಂತವಾಗುತ್ತಿರಲಿಲ್ಲ ಎಂದು ಹೇಳಿದರು.

ಸಾಕಷ್ಟು ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳು ಸಂಕಷ್ಟಗಳ ಮಧ್ಯೆಯೂ ಉತ್ತಮ ಸೇವೆ ಸಲ್ಲಿಸುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಕುರಿತು ‘ಧನದಾಹಿಗಳು’ ಎಂಬ ಕಟುಮಾತುಗಳನ್ನು ಆಡಬೇಕಾಗಿರಲಿಲ್ಲ. ಕೊಡುಕೊಳ್ಳುವ ಮೂಲಕ ವಿವಾದ ಬಗೆಹರಿಸಿಕೊಳ್ಳಬಹುದಾಗಿತ್ತು. ವಿಕ್ರಮ್‌ಜಿತ್‌ ಸೆನ್‌ ನೀಡಿದ ವರದಿಯ ಶಿಫಾರಸುಗಳನ್ನು ಮಸೂದೆಯಲ್ಲಿ ಸೇರಿಸಿಲ್ಲ. ಸರ್ಕಾರಿ ಆಸ್ಪತ್ರೆಗಳನ್ನೂ ಕಾನೂನಿನ ಚೌಕಟ್ಟಿಗೆ ಸೇರಿಸಬೇಕಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದಿರುವುದು ಸಮಾಧಾನಕರ ಸಂಗತಿ ಎಂದರು.

ADVERTISEMENT

ಮೌಢ ನಿಷೇಧ ಮಸೂದೆ ವ್ಯಾಪ್ತಿಗೆ ವಾಸ್ತು, ಜ್ಯೋತಿಷ ಮತ್ತು ಟಿ.ವಿಗಳಲ್ಲಿ ಮೌಢ್ಯವನ್ನು ಬಿತ್ತುವ ಕಾರ್ಯಕ್ರಮಗಳ ಮೇಲೆ ಕಡಿವಾಣ ಹಾಕುವುದಕ್ಕೆ ಒತ್ತು ಕೊಡಬೇಕಾಗಿತ್ತು ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.