ADVERTISEMENT

ಸರಳಿನಿಂದ ಹೊಡೆದು ಆಟೊ ಚಾಲಕನ ಕೊಲೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 20:06 IST
Last Updated 26 ಜೂನ್ 2016, 20:06 IST

ಬೆಂಗಳೂರು: ಆಟೊ ಚಾಲಕನನ್ನು ದುಷ್ಕರ್ಮಿಗಳು ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ಗಾರ್ವೆಬಾವಿಪಾಳ್ಯದಲ್ಲಿ ಭಾನುವಾರ ನಡೆದಿದೆ.

ಮಡಿವಾಳ ಸಮೀಪದ ಸುಭಾಷ್ ನಗರ ನಿವಾಸಿ ಇಮ್ರಾನ್‌ (32) ಮೃತಪಟ್ಟವರು. ಬೆಳಿಗ್ಗೆ 5 ರಿಂದ 6.30ರ ಅವಧಿಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.


ಗಾರ್ವೆಬಾವಿಪಾಳ್ಯದಲ್ಲಿ  ಶವವೊಂದು ಪತ್ತೆಯಾಗಿರುವುದಾಗಿ ದಾರಿಹೋಕರು ಬೆಳಿಗ್ಗೆ 6.30ರ ಸುಮಾರಿಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದರು ಎಂದು ಅವರು ಹೇಳಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಶವ ಹಾಗೂ ಅದರ ಬಳಿ ಆಟೊ ರಿಕ್ಷಾ ಕಂಡಿದೆ. ಆಟೊದಲ್ಲಿದ್ದ ಗುರುತಿನ ಚೀಟಿ ಮೂಲಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ಕೆಲವು ಸಂಗತಿಗಳ ಬಗ್ಗೆ ಚರ್ಚಿಸಲು ಇಮ್ರಾನ್ ಅವರನ್ನು ದುಷ್ಕರ್ಮಿಗಳು ಕರೆ ಮಾಡಿ ಕರೆದಿದ್ದಾರೆ. ಈ ವೇಳೆ, ವಾಗ್ವಾದ ನಡೆದಿದೆ. ಬಳಿಕ ಅವರು ಇಮ್ರಾನ್‌ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಮ್ರಾನ್‌, ಕುಸಿದು ಬಿದ್ದಿದ್ದಾನೆ. ಆತನ ರಕ್ತಸಿಕ್ತ ಸ್ಥಿತಿಯನ್ನು ನೋಡಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೂರು ಮದುವೆ: ‘ಮೃತ ಇಮ್ರಾನ್‌ ಮೂರು ಮದುವೆಯಾಗಿದ್ದ. ಮೊದಲ ಮದುವೆ ವಿಚ್ಛೇದನದಲ್ಲಿ ಅಂತ್ಯ ಕಂಡಿತ್ತು. ಅವರಿಗೆ ಹಲವು ಸಮಸ್ಯೆಗಳು ಇದ್ದವು ಎಂದು  ಕೆಲವು ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಹೇಳಿದ್ದಾರೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಇರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.