ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ₹6.90 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಸಂಜಯ್ ಕಿರಣ ಎಂಬಾತನ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಣ ಕಳೆದುಕೊಂಡಿರುವ ಹನುಮಂತನಗರ ನಿವಾಸಿ ರಕ್ಷಿತಾ ಎಂಬುವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.
2018ರ ಜನವರಿಯಲ್ಲಿ ರಕ್ಷಿತಾರನ್ನು ಸಂಪರ್ಕಿಸಿದ್ದ ಆರೋಪಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅದನ್ನು ನಂಬಿದ್ದ ರಕ್ಷಿತಾ ಹಾಗೂ ಅವರ ತಮ್ಮ, ಶಾಸಕರ ಭವನದಲ್ಲಿ ಆರೋಪಿಯನ್ನು ಭೇಟಿಯಾಗಿದ್ದರು.
ದೂರುದಾರರ ತಮ್ಮನಿಗೆ ಎಫ್ಡಿಎ ಹಾಗೂ ಆತನ ಸ್ನೇಹಿತೆಗೆ ಎಸ್ಡಿಎ ಹುದ್ದೆ ಕೊಡಿಸುವುದಾಗಿ ಹೇಳಿದ್ದ ಆರೋಪಿ, ಆರಂಭದಲ್ಲಿ ₹70 ಸಾವಿರ ಪಡೆದುಕೊಂಡಿದ್ದ. ಜ. 22ರಂದು 6.20 ಲಕ್ಷ ತೆಗೆದುಕೊಂಡಿದ್ದ. ತಿಂಗಳು ಕಳೆದರೂ ಕೆಲಸ ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದರೂ ಕೊಟ್ಟಿರಲಿಲ್ಲ. ಆಗ ರಕ್ಷಿತಾ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.