ADVERTISEMENT

‘ಸಾಹಿತ್ಯದಿಂದ ಸಜ್ಜನಿಕೆ ಬೆಳೆಯುತ್ತೆ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 18:47 IST
Last Updated 12 ಫೆಬ್ರುವರಿ 2017, 18:47 IST
‘ಸಾಹಿತ್ಯದಿಂದ ಸಜ್ಜನಿಕೆ ಬೆಳೆಯುತ್ತೆ’
‘ಸಾಹಿತ್ಯದಿಂದ ಸಜ್ಜನಿಕೆ ಬೆಳೆಯುತ್ತೆ’   
ಬೆಂಗಳೂರು: ‘ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿರುವ ರಾಜಕಾರಣಿಗಳು ಸಜ್ಜನರಾಗಿರುತ್ತಾರೆ’ ಎಂದು ಚಿಂತಕ ಗೊ.ರು.ಚನ್ನಬಸಪ್ಪ ಹೇಳಿದರು.
 
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಏರ್ಪಡಿಸಿದ್ದ ‘ಎಚ್‌.ಎಸ್‌. ಮಹದೇವ ಪ್ರಸಾದ್‌ ಅವರ ಸ್ಮರಣಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
 
‘ಮಹದೇವ ಪ್ರಸಾದರಿಗೆ ಸಾಹಿತ್ಯದ ಅಭಿರುಚಿ ಇತ್ತು. ಆದ್ದರಿಂದ ಅವರ ಜೀವನ ಸಂಸ್ಕಾರದಿಂದ ಕೂಡಿತ್ತು’ ಎಂದರು.
 
‘ಇಂದಿನ ರಾಜಕೀಯ ಪರಿಸ್ಥಿತಿ ಕಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮನದಲ್ಲಿಯೇ ಮರುಗುತ್ತಿದ್ದಾರೆ. ತಮಿಳುನಾಡಿನ ವಿದ್ಯಮಾನಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
 
ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ‘ಪ್ರಸಾದರು ಆಡಳಿತದಲ್ಲಿ ಮಾನವೀಯತೆ ಮತ್ತು ದೂರದೃಷ್ಟಿತನ ಅಳವಡಿಕೊಂಡಿದ್ದರು. ಅವರಲ್ಲಿ ಸಚಿವ ಸ್ಥಾನದ ಅಹಂಕಾರ ಇರಲಿಲ್ಲ. ಮಾಧ್ಯಮಗಳು ರಾಜಕಾರಣಿಗಳ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸುತ್ತವೆ. ಅವರು ವಾರದಲ್ಲಿ ಒಮ್ಮೆಯಾದರೂ ಸಜ್ಜನ ರಾಜಕಾರಣಿಗಳ ಬಗ್ಗೆ ಮಾತನಾಡಬೇಕು ಹಾಗೂ ಬರೆಯಬೇಕು. ಆಗ ಭ್ರಷ್ಟರು ಬದಲಾಗುವ ಸಂಭವ ಇರುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.