ADVERTISEMENT

ಸಾಹಿತ್ಯ ಕೈ ಹಿಡಿಯದಿದ್ದರೆ ಹುಚ್ಚನಾಗುತ್ತಿದ್ದೆ: ಸಿದ್ಧಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 20:11 IST
Last Updated 26 ಮಾರ್ಚ್ 2017, 20:11 IST
ಜಿ.ಎಸ್‌.ಸಿದ್ಧಲಿಂಗಯ್ಯ ಹಾಗೂ ಅವರ ಪತ್ನಿ ಪ್ರೇಮಾ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಅಭಿನಂದನಾ ಸಮಿತಿಯ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ, ಸಾಹಿತಿ ಗೊ.ರು. ಚನ್ನಬಸಪ್ಪ, ಹಂ.ಪ. ನಾಗರಾಜಯ್ಯ, ವಚನ ಜ್ಯೋತಿ ಬಳಗದ ಪಿನಾಕಪಾಣಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಎಂ.ಚಿದಾನಂದಮೂರ್ತಿ, ಸುಮತೀಂದ್ರ ನಾಡಿಗ್‌ ಇದ್ದಾರೆ  –ಪ್ರಜಾವಾಣಿ ಚಿತ್ರ
ಜಿ.ಎಸ್‌.ಸಿದ್ಧಲಿಂಗಯ್ಯ ಹಾಗೂ ಅವರ ಪತ್ನಿ ಪ್ರೇಮಾ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಅಭಿನಂದನಾ ಸಮಿತಿಯ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ, ಸಾಹಿತಿ ಗೊ.ರು. ಚನ್ನಬಸಪ್ಪ, ಹಂ.ಪ. ನಾಗರಾಜಯ್ಯ, ವಚನ ಜ್ಯೋತಿ ಬಳಗದ ಪಿನಾಕಪಾಣಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಎಂ.ಚಿದಾನಂದಮೂರ್ತಿ, ಸುಮತೀಂದ್ರ ನಾಡಿಗ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಹಿತ್ಯವು ನನ್ನ ಕೈ ಹಿಡಿಯದೇ ಹೋಗಿದ್ದರೆ ನಾನು ಹುಚ್ಚನಾಗುತ್ತಿದ್ದೆ’ ಎಂದು ಸಾಹಿತಿ ಪ್ರೊ.ಜಿ.ಎಸ್‌. ಸಿದ್ಧಲಿಂಗಯ್ಯ ಹೇಳಿದರು. ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಕೋಪಿಷ್ಟನಾಗಿದ್ದರೂ ಜನರು ನನ್ನನ್ನು ಪ್ರೀತಿಸುತ್ತಾರೆ. ಅದಕ್ಕೆ ಕೃತಜ್ಞನಾಗಿದ್ದೇನೆ. ಸಾತ್ವಿಕ ಕೋಪ ಇಲ್ಲದಿದ್ದರೆ ವ್ಯಕ್ತಿತ್ವ ಪೂರ್ಣವಾಗದು. ಈ ಗುಣ ತಂದೆಯಿಂದ ಬಂದ ಬಳುವಳಿ’ ಎಂದರು.

‘ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರನ್ನಾಗಿ ನನ್ನನ್ನು ನೇಮಿಸಲು ಅಂದಿನ ಶಿಕ್ಷಣ ಇಲಾಖೆಯ ಸಚಿವರಿಗೆ ಇಷ್ಟ ಇರಲಿಲ್ಲ. ಐಎಎಸ್‌ ಅಧಿಕಾರಿಯನ್ನು ಆ ಸ್ಥಾನದಲ್ಲಿ ಕೂರಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ಇದಕ್ಕೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಶಿವಕುಮಾರ ಸ್ವಾಮೀಜಿ ಅವರು ಅಂದಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು’ ಎಂದು ಮೆಲುಕು ಹಾಕಿದರು.

ADVERTISEMENT

‘ನಿಸ್ಸೀಮ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಸಾಹಿತಿ ಹಂ.ಪ. ನಾಗರಾಜಯ್ಯ, ‘ಸಿದ್ಧಲಿಂಗಯ್ಯ ಅವರ ಬದುಕಿನ ಆಯಾಮ, ಕೃತಿಗಳ ವೈಶಿಷ್ಟ್ಯ, ಕವಿತೆಗಳ ಒಳನೋಟಗಳ ಕುರಿತ ಲೇಖನಗಳನ್ನು ಈ ಗ್ರಂಥ ಒಳಗೊಂಡಿದೆ. ಅವರು ಪ್ರಥಮದರ್ಜೆಯ ಕವಿ ಹಾಗೂ ವಿಮರ್ಶಕ’ ಎಂದು ಶ್ಲಾಘಿಸಿದರು.

‘ಅಸಮಗ್ರ’ ಸಮಗ್ರ ಕಾವ್ಯ ಸಂಪುಟವನ್ನು ಬಿಡುಗಡೆಗೊಳಿಸಿದ ಕವಿ ಸುಮತೀಂದ್ರ ನಾಡಿಗ್‌ ಮಾತನಾಡಿ, ‘ಸಿದ್ಧಲಿಂಗಯ್ಯ ಅವರು ವೀರಶೈವ ಕಾವ್ಯ ಪರಂಪರೆಯನ್ನು ವಿಸ್ತರಿಸಿದ್ದಾರೆ. ಅಲ್ಲಮ, ಬಸವಣ್ಣ ಸೇರಿದಂತೆ ವಚನಕಾರರ ಬಗ್ಗೆ ಕಾವ್ಯ ರಚಿಸಿದ್ದಾರೆ. ಕನ್ನಡ ಕಾವ್ಯ ಲೋಕದಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ’ ಎಂದು ಬಣ್ಣಿಸಿದರು.

ಆತ್ಮಕಥೆ ‘ನೆನಪಿಗೊಗ್ಗರಣೆ’ ಕೃತಿ ಬಿಡುಗಡೆಗೊಳಿಸಿದ ಸಂಶೋಧಕ ಎಂ. ಚಿದಾನಂದಮೂರ್ತಿ, ‘ಆತ್ಮಕಥೆ ಎಂಬುದು ನಮ್ಮನ್ನು ನಾವೇ ಬೆತ್ತಲುಗೊಳಿಸಿಕೊಳ್ಳುವಂತಹದ್ದು. ಗೊಮ್ಮಟೇಶ್ವರ ಮೂರ್ತಿಯಂತೆ. ಸಿದ್ಧಲಿಂಗಯ್ಯ ಅವರೂ ಗೊಮ್ಮಟನಂತೆ ಎತ್ತರದವರು ಹಾಗೂ ಉನ್ನತಿ ಸಾಧಿಸಿದವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.