ADVERTISEMENT

ಸಿಂಧೂ ಮೆನನ್ ಅಣ್ಣನ ವಿರುದ್ಧ ಮತ್ತೊಂದು ಪ್ರಕರಣ

ಗಣೇಶ್ ರಾವ್‌ ಹೆಸರಿನ ನಕಲಿ ದಾಖಲೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:56 IST
Last Updated 11 ಮಾರ್ಚ್ 2018, 19:56 IST

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಗೆ ವಂಚನೆ ಪ್ರಕರಣ ಸಂಬಂಧ ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿರುವ ನಟಿ ಸಿಂಧೂ ಮೆನನ್ ಅಣ್ಣ ಕೆ.ವಿ.ಮನೋಜ್ (30) ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

‘ಮನೆ ಬಾಡಿಗೆ ಕರಾರು ಪತ್ರ ಮಾಡಿಸಲು ಪಾನ್‌ ಕಾರ್ಡ್‌ ಹಾಗೂ ಚುನಾವಣಾ ಗುರುತಿನ ಚೀಟಿಯ ನಕಲು ಪ್ರತಿಗಳನ್ನು ಮನೋಜ್ ಪಡೆದಿದ್ದರು. ಅವುಗಳಲ್ಲಿನ ಚಿತ್ರ ಬದಲಿಸಿ ನನ್ನ ಹೆಸರಿನಲ್ಲಿಯೇ ವಿಜಯಾ ಬ್ಯಾಂಕಿಗೆ ಶ್ಯೂರಿಟಿ ನೀಡಿದ್ದಾರೆ’ ಎಂದು ಆರೋಪಿಸಿ ಬಿಎಂಟಿಸಿ ಚಾಲಕ ಗಣೇಶ್ ರಾವ್‌ ಯಶವಂತಪುರ ಠಾಣೆಗೆ ದೂರು ಕೊಟ್ಟಿದ್ದಾರೆ.

ರಾವ್ ಅವರ ಮತ್ತಿಕೆರೆಯಲ್ಲಿನ ಮನೆಯನ್ನು ಸುಧಾ ರಾಜಶೇಖರ್ ಬಾಡಿಗೆಗೆ ಪಡೆದಿದ್ದರು. ಅದೇ ಕಟ್ಟಡದಲ್ಲಿ ಮತ್ತೊಂದು ಮನೆ ಖಾಲಿ ಇತ್ತು. ಅದರಲ್ಲಿ ‘ಸರಳವಾಸ್ತು’ ಕಚೇರಿ ಪ್ರಾರಂಭಿಸುವುದಾಗಿ ಹೇಳಿದ್ದ ದೇವಿ ಮೆನನ್, ಅದನ್ನು ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ಅದಕ್ಕೆ ಪ್ರತಿಯಾಗಿ ಮನೋಜ್, ಮುಂಗಡವಾಗಿ ₹1 ಲಕ್ಷದ ಚೆಕ್‌ ಅನ್ನು ರಾವ್ ಅವರಿಗೆ ನೀಡಿದ್ದರು. ಕರಾರು ಪತ್ರವನ್ನು ಮಾಡಿಸಿಕೊಡುವುದಾಗಿ ನಂಬಿಸಿದ್ದ ಆರೋಪಿ, ರಾವ್ ಅವರಿಂದ ಹಲವು ದಾಖಲೆಗಳ ನಕಲು ಪ್ರತಿಗಳನ್ನು ಪಡೆದಿದ್ದರು. ಅವುಗಳಲ್ಲಿನ ಚಿತ್ರಗಳಿಗೆ ಬೇರೊಬ್ಬ ವ್ಯಕ್ತಿಯ ಚಿತ್ರಗಳನ್ನು ಅಂಟಿಸಿ ನಕಲಿ ದಾಖಲೆ ಸೃಷ್ಟಿಸಿದ್ದರು ಎಂದು ಹೇಳಿದರು.‌

ಇನ್‌ಫೆಂಟ್ರಿ ರಸ್ತೆ ಬಳಿಯ ವಿಜಯಾ ಬ್ಯಾಂಕಿನಲ್ಲಿ ₹ 67 ಲಕ್ಷ ಸಾಲ ಪಡೆದಿದ್ದ ಮನೋಜ್, ರಾವ್ ಹೆಸರಿನ ನಕಲಿ ದಾಖಲೆಗಳನ್ನು ಬ್ಯಾಂಕಿಗೆ ಶ್ಯೂರಿಟಿಯಾಗಿ ನೀಡಿದ್ದರು. ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದ ಕಾರಣಕ್ಕೆ, ಶ್ಯೂರಿಟಿ ನೀಡಿದ್ದವರಿಗೆ ಬ್ಯಾಂಕಿನ ಸಿಬ್ಬಂದಿ ಇತ್ತೀಚೆಗೆ ನೋಟಿಸ್ ನೀಡಿದ್ದರು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.