ADVERTISEMENT

ಸೈಕಲ್ ದಿನಾಚರಣೆ: ಯಲಹಂಕ ಕೆರೆ ಆವರಣದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:42 IST
Last Updated 5 ಜುಲೈ 2015, 19:42 IST

ಬೆಂಗಳೂರು: ನಗರ ಭೂ ಸಾರಿಗೆ ಇಲಾಖೆ, ಬೆಂಗಳೂರಿನ ಸಾರ್ವಜನಿಕ ಸ್ಥಳ ಗಳ ಒಕ್ಕೂಟ(ಬಿಸಿಒಎಸ್‌), ಜಲಸಿರಿ ಪ್ರತಿಷ್ಠಾನ ಹಾಗೂ ಯಲಹಂಕ ಯು ನೈಟೆಡ್‌ ಎನ್ವಿರಾನ್‌ಮೆಂಟ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಯಲಹಂಕದ ಕೆರೆ ಆವರಣದಲ್ಲಿ ಭಾನುವಾರ ಸೈಕಲ್‌ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಗ್ಗೆ 6.30ಕ್ಕೆ ಯೋಗದ ಮೂಲಕ ಸೈಕಲ್‌ ದಿನಾಚರಣೆಗೆ ಚಾಲನೆ ನೀಡಲಾಯಿತು. ನಂತರ ಕೆರೆಯ ಆವರದಲ್ಲಿ ನಡೆದ  ಸೈಕಲ್‌ ಜಾಥಾದಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸೈಕಲ್‌ ಪ್ರೇಮಿಗಳು, ಜನ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸ್ಥಳೀಯ ಬಡಾವಣೆಗಳ ಜನರು ಭಾಗವಹಿಸಿ, ಕೆರೆಯ ಆವರಣದಲ್ಲಿ 6.5 ಕಿ.ಮೀ‌ ದೂರದವರೆಗೆ ಸೈಕಲ್‌ ತುಳಿದು ಜಾಥಾ ನಡೆಸಿದರು.

ಮಕ್ಕಳು ಹಾಗೂ ಪೋಷಕರಿಗಾಗಿ ಕುಂಟೆಬಿಲ್ಲೆ, ಹಾವು–ಏಣಿಯಾಟ, ಗಾಳಿಪಟ ಹಾರಿಸುವುದು, ಹಗ್ಗಜಗ್ಗಾಟ, ಲೆಮೆನ್‌ ಅಂಡ್‌ ಸ್ಪೂನ್‌, ಚೆಸ್‌, ಅಳಿ ಗುಳಿಮಣೆ, ಬಕೆಟ್‌ ಅಂಡ್‌ ಬಾಲ್‌, ರಂಗೋಲಿ, ಹಾಡು, ನೃತ್ಯ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಿಮಿಕ್ರಿ, ಜಾದೂ ಪ್ರದರ್ಶನಗಳು ನಡೆದವು. ಗಂಗೆತ್ತಿನ ಆಟ ಹಾಗೂ ಶಾಲಾ ಮಕ್ಕಳಿಂದ ನಡೆದ ಡೊಳ್ಳುಕುಣಿತ ಪ್ರದರ್ಶನ ಜನರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ‘ಸರ್ಕಾ ರದಿಂದ ಯಾವುದೇ ಅಭಿವೃದ್ಧಿ ಕಾರ್ಯಕೈಗೊಂಡರೂ ಅದರಲ್ಲಿ ಸಾರ್ವಜ ನಿಕರ ಸಹಭಾಗಿತ್ವ ಅತ್ಯಗತ್ಯ. ಸುಮಾರು 300 ಎಕರೆ ವಿಸ್ತೀರ್ಣವುಳ್ಳ ಈ ಕೆರೆಯನ್ನು ₨19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ಜಲಸಿರಿ ಪ್ರತಿಷ್ಠಾನದ ಅಧ್ಯಕ್ಷ ಅ.ಬ.ಶಿವಕುಮಾರ್‌ ಮಾತನಾಡಿ, ‘ಕೆರೆ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಥಮ ಪ್ರಯತ್ನ ಇದಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.  ಸ್ಥಳೀಯ ಸಂಘ–ಸಂಸ್ಥೆಗಳ ಸಹಕಾರ, ಶ್ರಮದಾನದ ಮೂಲಕ ಕೆರೆಯನ್ನು ಸ್ವಚ್ಛ ಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.