ಬೆಂಗಳೂರು: ನಿಲ್ದಾಣದಲ್ಲಿ ಆಟೊ ನಿಲ್ಲಿಸಲು ಹಫ್ತಾ ಕೇಳುತ್ತಿದ್ದ ಕಾರಣಕ್ಕೆ ಆಟೊ ಚಾಲಕ ಆ್ಯಂಡ್ರೋಸ್ (25) ಅವರನ್ನು ಕೊಲೆ ಮಾಡಿದ್ದ ಐವರು ಆಟೊ ಚಾಲಕರು ಮಹಾಲಕ್ಷ್ಮಿ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಂದಿನಿ ಲೇಔಟ್ನ ಜಯಮಾರುತಿ ನಗರದ ರಾಕೇಶ್ ಅಲಿಯಾಸ್ ರಾಖಿ (22), ಮಣಿ (25), ವಿನಯ್ ಅಲಿಯಾಸ್ ವಿನಿ (20), ಕಮ್ಮಗೊಂಡನಹಳ್ಳಿಯ ರಾಜಶೇಖರ್ ಅಲಿಯಾಸ್ ಶೇಖರ್ (26) ಹಾಗೂ ಮಾರಣ್ಣ ಲೇಔಟ್ನ ಚಂದನ್ ಅಲಿಯಾಸ್ ಚಂದು (25) ಬಂಧಿತರು.
‘ಆ್ಯಂಡ್ರೋಸ್ ಅವರ ಸ್ನೇಹಿತರ ವಿಚಾರಣೆಯಿಂದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತು. ಅದರಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಆ್ಯಂಡ್ರೋಸ್, ಆಟೊ ನಿಲ್ದಾಣದ ಇತರ ಆಟೊ ಚಾಲಕರನ್ನು ಬೆದರಿಸಿ ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ದಿನೇ ದಿನೇ ಅವರ ಉಪಟಳ ಹೆಚ್ಚಾಗಿತ್ತು. ಹೀಗಾಗಿ, ಹತ್ಯೆ ಮಾಡಿದೆವು’ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಹತ್ಯೆಗೂ ಮುನ್ನ 15 ದಿನಗಳ ಹಿಂದೆ ನಡೆದ ಗಲಾಟೆಯಲ್ಲಿ ಮಣಿಗೆ ಆ್ಯಂಡ್ರೋಸ್ ಹಿಗ್ಗಾಮುಗ್ಗಾ ಥಳಿಸಿದ್ದರು. ಇದೇ ಕಾರಣಕ್ಕೆ ಹತ್ಯೆ ಮಾಡಲು ಆರೋಪಿ ನಿರ್ಧರಿಸಿದ್ದ. ಪ್ರತಿನಿತ್ಯ ಮದ್ಯ ಕೊಡಿಸುವಂತೆ ಹಾಗೂ ಹಣ ನೀಡುವಂತೆ ಆ್ಯಂಡ್ರೋಸ್ ತೊಂದರೆ ಕೊಡುತ್ತಿದ್ದರಿಂದ ಬೇಸತ್ತಿದ್ದ ಇತರ ಆರೋಪಿಗಳು ಮಣಿ ನಿರ್ಧಾರಕ್ಕೆ ಬೆಂಬಲ ನೀಡಿದ್ದರು ಎಂದು ಪೊಲೀಸರು ತಿಳಿಸಿದರು.
ಶ್ರೀರಾಂಪುರ ನಿವಾಸಿಯಾದ ಆ್ಯಂಡ್ರೋಸ್ ಸ್ನೇಹಿತನ ಭೇಟಿಗೆಂದು ಪಶ್ಚಿಮ ಕಾರ್ಡ್ ರಸ್ತೆಗೆ ಬರುತ್ತಿದ್ದರು. ಅಲ್ಲಿಗೆ ಬಂದ ಆರೋಪಿಗಳು ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದರು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.