ಬೆಂಗಳೂರು: ಹಾವುಗಳನ್ನು ಹಿಡಿದು ಪೆಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಆರೋಪದ ಮೇಲೆ ಸಾಫ್ಟ್ವೇರ್ ಕಂಪೆನಿ ಉದ್ಯೋಗಿಗಳನ್ನು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರೂಪಲ್ ರಾಲ್ಫ್ ಮತ್ತು ಸುಭಾಷ್ ಬಂಧಿತರು. ಆರೋಪಿಗಳು ಮನೆಯ ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದ ಎಂಟು ಹಾವುಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಬಂಧಿತರು ಕುಟುಂಬ ಸದಸ್ಯರೊಂದಿಗೆ ಎಚ್ಎಸ್ಆರ್ ಲೇಔಟ್ ಸಮೀಪದ ಹರಳೂರು ಮುಖ್ಯರಸ್ತೆಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಆ ಅಪಾರ್ಟ್ಮೆಂಟ್ ಸುತ್ತಮುತ್ತ ಮರಗಿಡ ಹಾಗೂ ಪೊದೆಗಳಿದ್ದು, ಅಲ್ಲಿಂದ ಹಾವುಗಳು ಆಗಾಗ್ಗೆ ಅಪಾರ್ಟ್ಮೆಂಟ್ ಆವರಣಕ್ಕೆ ಬರುತ್ತಿದ್ದವು.
ಈ ಸಂಬಂಧ ರೂಪಲ್, ಸುಭಾಷ್ ಮತ್ತು ಅಪಾರ್ಟ್ಮೆಂಟ್ ನಿವಾಸಿಗಳು ಬಿಬಿಎಂಪಿ ಅರಣ್ಯ ಘಟಕದ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಹಾವುಗಳ ಉಪಟಳದ ಬಗ್ಗೆ ದೂರು ನೀಡಿದ್ದರು. ಆದರೆ, ಅರಣ್ಯ ಘಟಕದ ಸಿಬ್ಬಂದಿ ಅವರ ದೂರಿಗೆ ಸ್ಪಂದಿಸಿರಲಿಲ್ಲ. ಹೀಗಾಗಿ ರೂಪಲ್ ಹಾಗೂ ಸುಭಾಷ್, ಅಪಾರ್ಟ್ಮೆಂಟ್ ಆವರಣಕ್ಕೆ ಬರುತ್ತಿದ್ದ ಹಾವುಗಳನ್ನು ಹಿಡಿದು ಬನ್ನೇರುಘಟ್ಟ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕೊಟ್ಟಿದ್ದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಅವರು ಇತ್ತೀಚೆಗೆ ಎಂಟು ಹಾವುಗಳನ್ನು ಹಿಡಿದು ಬನ್ನೇರುಘಟ್ಟ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕೊಡುವ ಉದ್ದೇಶಕ್ಕಾಗಿ ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದರು. ಅವರು ಆ ಹಾವುಗಳನ್ನು ಹಿಡಿದಾಗ ತೆಗೆದಿದ್ದ ಛಾಯಾಚಿತ್ರಗಳನ್ನು ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದರು. ಅಲ್ಲದೇ, ಹಾವುಗಳನ್ನು ಹಿಡಿಯುವುದಾಗಿ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ನೋಡಿದ ವ್ಯಕ್ತಿಯೊಬ್ಬರು ಪಾಲಿಕೆಯ ಅರಣ್ಯ ಘಟಕದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಆ ಸುಳಿವು ಆಧರಿಸಿ ಪಾಲಿಕೆ ಸಿಬ್ಬಂದಿಯೊಂದಿಗೆ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.