ADVERTISEMENT

ಹಿಂದೂ ವಿಧವೆಯರ ಬದುಕು ಘೋರ: ಹೈಕೋರ್ಟ್‌ ಕಳವಳ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 20:07 IST
Last Updated 19 ಜುಲೈ 2017, 20:07 IST
ಹಿಂದೂ ವಿಧವೆಯರ ಬದುಕು ಘೋರ: ಹೈಕೋರ್ಟ್‌ ಕಳವಳ
ಹಿಂದೂ ವಿಧವೆಯರ ಬದುಕು ಘೋರ: ಹೈಕೋರ್ಟ್‌ ಕಳವಳ   

ಬೆಂಗಳೂರು: ‘ಹಿಂದೂ ವಿಧವೆಯರ ಬದುಕು ಘೋರವಾಗಿದೆ. ಇದಕ್ಕೆಲ್ಲಾ ರಾಜಕಾರಣ ಮತ್ತು ಅಧಿಕಾರಶಾಹಿ ವ್ಯವಸ್ಥೆಯೇ ಕಾರಣವಾಗಿದೆ’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

‘ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಅನುಕಂಪ ಆಧಾರಿತ ಹುದ್ದೆ ನೀಡಲು ನಿರ್ದೇಶಿಸಬೇಕು’ ಎಂದು ಕೋರಿದ್ದ ಪ್ರಕರಣದಲ್ಲಿ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಬೇಸರ ವ್ಯಕ್ತಪಡಿಸಿದೆ.

‘ಯುರೋಪ್‌ ರಾಷ್ಟ್ರಗಳಲ್ಲಿ ಕ್ರೈಸ್ತ ಮಿಷನರಿಗಳು ಮತ್ತು ಧಾರ್ಮಿಕ ಸಂಘಟನೆಗಳು ವಿಧವೆಯರ ಕುರಿತು ಸಾಕಷ್ಟು ಕಾಳಜಿ ವಹಿಸುತ್ತವೆ. ಆದರೆ, ಹಿಂದೂ ಸಮಾಜದಲ್ಲಿ ಮಾತ್ರ ಇವರ ಗೋಳು ಕೇಳುವವರು ಇಲ್ಲದಂತಾಗಿದೆ’ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಉತ್ತರ ಭಾರತದ ವಾರಾಣಸಿಯಲ್ಲಿ ವಿಧವೆಯರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇದೆ. ಆದರೆ, ದಕ್ಷಿಣ ಭಾರತದಲ್ಲಿ ಇಂತಹ ಯಾವುದೇ ಅನುಕೂಲ ಇಲ್ಲ’ ಎಂದು ಚೌಹಾಣ್‌ ಹೇಳಿದರು.

ಅರ್ಜಿದಾರರಾದ ಬಿ.ಆರ್.ಪುಷ್ಪಾ ಮೈಸೂರಿನ ಹೆಬ್ಬಾಳದ ನಿವಾಸಿ. ಅವರ ಪತಿ ಓವರ್‌ಸೀಸ್ ಬ್ಯಾಂಕಿನಲ್ಲಿ ನೌಕರಿ ಮಾಡುತ್ತಿದ್ದರು. ಸೇವೆಯಲ್ಲಿರುವಾಗಲೇ 2004ರಲ್ಲಿ ಅವರು ಸಾವಿಗೀಡಾಗಿದ್ದರು.

‘ಪತಿಯ ಸಾವಿನ ನಂತರ ನನಗೆ ಜೀವನಾಧಾರ ಇಲ್ಲವಾಗಿದೆ. ಆದ್ದರಿಂದ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು’ ಎಂದು ಪುಷ್ಪಾ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಬ್ಯಾಂಕ್‌ ತಿರಸ್ಕರಿಸಿತ್ತು. ಇದನ್ನು ಪುಷ್ಪಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದೇ 21ರಂದು ಬ್ಯಾಂಕ್‌ ಅಧಿಕಾರಿಗಳು ಕೋರ್ಟ್‌ಗೆ ಹಾಜರಾಗಿ ವಿವರಣೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.