ADVERTISEMENT

‘ಅಕಾಡೆಮಿ ಪುಸ್ತಕಗಳು ಇ–ಬುಕ್‌ಗೆ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2015, 19:52 IST
Last Updated 22 ಜನವರಿ 2015, 19:52 IST

ಬೆಂಗಳೂರು: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಅಕಾಡೆಮಿಗಳು ಪ್ರಕಟಿಸುವ ಪುಸ್ತಕ­ಗಳನ್ನು ಇ–ಬುಕ್‌ಗೆ ಅಳವಡಿಸುವ ಚಿಂತನೆ ಇದೆ. ಆದ್ದರಿಂದ, ಪುಸ್ತಕಗಳ ಲೇಖಕರು ತಮ್ಮ ಕೃತಿಗಳ ಹಕ್ಕುಗಳನ್ನು ಕೊಡಬೇಕು’ ಎಂದು ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ 2011, 2012ನೇ ಸಾಲುಗಳ ಗೌರವ ಪ್ರಶಸ್ತಿ ಮತ್ತು 2010,2011ನೇ ಸಾಲುಗಳ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘18 ವರ್ಷದೊಳಗಿನ ಯುವ ಪ್ರತಿಭಾನಿತ್ವರ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪ್ರೋತ್ಸಾಹಿಸಬೇಕು. ಇನ್ನು ಮುಂದೆ ಅಕಾಡೆಮಿ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದರು.

ಹಿರಿಯ ಕವಿ ಡಾ.ಚೆನ್ನವೀರ ಕಣವಿ ಮಾತನಾಡಿ, ‘ಇತ್ತೀಚೆಗೆ ಹೊಸಗನ್ನಡದ ವಿದ್ಯಾರ್ಥಿಗಳಿಗೆ ಹಳೆಗನ್ನಡದ ಸಂಪರ್ಕ ತಪ್ಪಿಯೇ ಹೋಗುತ್ತಿದೆ. ಇದರಿಂದ, ಕನ್ನಡ ಪಾಂಡಿತ್ಯ ವಾಹಿನಿಯಲ್ಲಿ ವಿಚ್ಛೇದನ ಉಂಟಾಗುತ್ತಿದೆ. ಇದು ತಪ್ಪಿ ಹಳೆಯದರ ಅನುಸಂಧಾನ ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಮಲಯಾಳಂ ಕವಿ ಡಾ.ಕೆ.ಸಚ್ಚಿ­ದಾನಂದನ್‌ ಮಾತನಾಡಿ, ‘ಇಂದು ಯುವ ಬರಹಗಾರರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಅವರಿಗೆ ಅಗತ್ಯವಾದ ವಿಮರ್ಶೆಯ ಕೊರತೆ ಇದೆ’ ಎಂದು ಹೇಳಿದರು.

‘ಧಾರ್ಮಿಕ ಮೂಲಭೂತ­ವಾದಿಗಳು ಕೂಡ ವಿವಿಧ ರೂಪಗಳಲ್ಲಿ ಬರಹಗಾರರಿಗೆ ಸವಾಲು ಒಡ್ಡುತ್ತಿದ್ದಾರೆ. ಪುಸ್ತಕಗಳನ್ನು ಸುಡುವುದು, ನಿಷೇಧ ಹೇರುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಇದಕ್ಕೆ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಪ್ರಕರಣವೇ ತಾಜಾ ಉದಾಹರಣೆ’ ಎಂದರು.

2011 ಮತ್ತು 2012ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾದ ಹತ್ತು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾವ್ಯ, ಕಾದಂಬರಿ, ನಾಟಕ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ 2010 ಮತ್ತು 2011ನೇ ಸಾಲಿನ ಪುಸ್ತಕ ಬಹುಮಾನಿತರಾದ 35 ಜನರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2010 ಮತ್ತು 2011ನೇ ಸಾಲಿನ ಅಕಾಡೆಮಿ ದತ್ತಿನಿಧಿ ಬಹುಮಾನಕ್ಕೆ ಆಯ್ಕೆಯಾದ ಎಂಟು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.