ಬೆಂಗಳೂರು:‘ಹಿಂದೂ ಧರ್ಮದ ಹೆಸರಿನಲ್ಲಿ ಕಪಟತನದ ಮುಖವಾಡ ಧರಿಸಿರುವ ಆರ್ಎಸ್ಎಸ್ನವರಿಗೆ ಸಾಮಾಜಿಕ ಬದ್ಧತೆ ಹಾಗೂ ನೈತಿಕ ನೆಲೆಗಟ್ಟು ಇಲ್ಲ. ಅವರು ಹೇಳುವುದೊಂದು, ಮಾಡುವುದೊಂದು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಆರೋಪಿಸಿದರು.
ಸರ್ವೋದಯ ದಿನಾಚರಣೆ ಅಂಗವಾಗಿ ಲಂಕೇಶ್ ಪ್ರಕಾಶನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತ ನಾಡಿದರು.
ಎ.ಕೆ.ಸುಬ್ಬಯ್ಯ ಅವರ ‘ಆರ್ಎಸ್ಎಸ್ ಅಂತರಂಗ’ ಪುಸ್ತಕದ ಇಂಗ್ಲಿಷ್ ಅವತರಣಿಕೆ (ಹಿಡನ್ ಫೇಸ್ ಆಫ್ ಆರ್ಎಸ್ಎಸ್) ಹಾಗೂ ಎಚ್.ಎಸ್.ದೊರೆಸ್ವಾಮಿ ಬರೆದಿರುವ ‘ನೆನಪಿನ ಸುರುಳಿ ತೆರೆದಾಗ’ ಬಿಡುಗಡೆಯಾದ ಕೃತಿಗಳು. ‘ಆರ್ಎಸ್ಎಸ್ನವರು ಧಾರ್ಮಿಕರೂ ಅಲ್ಲ, ದೈವಿಕರೂ ಅಲ್ಲ. ಅವರು ಆರಾಧಿಸುವುದು ಸನಾತನ ಧರ್ಮ. ಆದರೆ, ಹಿಂದೂ ಧರ್ಮದ ಹೆಸರಿನಲ್ಲಿ ಹಿಂದೂಗಳನ್ನು ಸಂಘಟಿಸುತ್ತಿದ್ದಾರೆ’ ಎಂದರು.
‘ಆರ್ಎಸ್ಎಸ್ನವರು ದೊಡ್ಡ ಕಪಟಿಗಳು, ಆಷಾಢಭೂತಿಗಳು. ಈ ಸಂಘಟನೆ ಕೆಲ ಕಾರ್ಯ ಕರ್ತರು ರಾಜಕಾರಣಕ್ಕೆ ಬಂದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರವೂ ಸಂಸ್ಕೃತಿಗೆ ಎಸಗುವ ಅನಾಚಾರ ಎಂಬುದನ್ನು ಕಾರ್ಯ ಕರ್ತರು ಇದುವರೆಗೂ ಕಲಿತಿಲ್ಲವೇ? ಎಂದು ಪ್ರಶ್ನಿಸಿದರು.
ಗಾಂಧೀಜಿಯ ಕೊನೆಯ ಕೊಂಡಿ: ‘ಗಾಂಧೀಜಿಯ ಮುಂದುವರಿಕೆ ಕೊಂಡಿ ಎಚ್.ಎಸ್.ದೊರೆಸ್ವಾಮಿ. ಕೊನೆಯ ಕೊಂಡಿ ಕೂಡ. ರಾಜಕೀಯ ಕೊಳಕನ್ನು ವಿರೋಧಿಸುತ್ತಾ ಸಮಾಜದ ಅನಿಷ್ಟಗಳನ್ನು ವಿರೋಧಿಸುತ್ತಿದ್ದಾರೆ. ಜ್ವಲಂತ ಸಾಕ್ಷಿಪ್ರಜ್ಞೆ ಎನಿಸಿದ್ದಾರೆ. ಅವರಿಗೆ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪುರಸ್ಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಪ್ರೊ.ವಿ.ಎಸ್.ಶ್ರೀಧರ್ ಕಾರ್ಯಕ್ರಮದಲ್ಲಿ ಇದ್ದರು. ಬಿಡುಗಡೆಯಾದ ಪುಸ್ತಕಗಳು: ಹಿಡನ್ ಫೇಸ್ ಆಫ್ ಆರ್ಎಸ್ಎಸ್: ಬೆಲೆ: ₨ 80, ನೆನಪಿನ ಸುರುಳಿ ತೆರೆದಾಗ: ₨ 125
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.