ಬೆಂಗಳೂರು: ‘ಜಾತಿಯನ್ನು ನಿರಾಕರಿಸಿದ್ದ ಕನಕದಾಸರನ್ನು ಒಂದು ಸಮುದಾಯ, ಒಂದು ಜಾತಿಗೆ ಸೀಮಿತಗೊಳಿ ಸಲಾಗಿದೆ. ಅವರು ರಾಷ್ಟ್ರೀಯ ಸಂತಕವಿ. ಒಂದು ರಾಜ್ಯ, ಒಂದು ಸಮುದಾಯ, ಒಂದು ಭಾಷೆಗಷ್ಟೇ ಸಿೀಮಿತವಾ ಗಬಾರದು’ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಹೇಳಿದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಆರಂಭಿಸಿರುವ ಕನಕದಾಸರ ಕುರಿತು ಸಮಗ್ರ ಮಾಹಿತಿ ಒದಗಿಸುವ ವೆಬ್ಸೈಟ್ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕನಕದಾಸರ ಸಾಹಿತ್ಯ ಮಾತ್ರವಲ್ಲ; ಕನ್ನಡದ ಎಲ್ಲಾ ಸಾಹಿತ್ಯವು ಅಂತರ್ಜಾಲದಲ್ಲಿ ಲಭಿಸುವಂತಾಗಬೇಕು. ಏಕೆಂದರೆ ಮುದ್ರಣ ರೂಪದಲ್ಲಿರುವ ಪ್ರಮುಖರ ಕೃತಿಗಳನ್ನು ಸಂರಕ್ಷಿಸಿಡುವುದು ಕಷ್ಟದ ಕೆಲಸ. ವಿದೇಶಗಳಲ್ಲಿ ಎಲ್ಲಾ ಕೃತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ’ ಎಂದು ನುಡಿದರು.
ಸಂಪುಟಗಳ ಪ್ರಕಟಣೆಗೆ ₨ 3.75 ಕೋಟಿ: ಕನಕನನ್ನು ಒಂದೇ ಸೂರಿನಡಿ ಇಡೀ ವಿಶ್ವಕ್ಕೆ ಪರಿಚಯಿಸಲು ಆರಂಭಿಸಿರುವ www. saintpoetkanaka.in ಎಂಬ ಜಾಲತಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ‘ಕನಕದಾಸರ ಸಾಹಿತ್ಯವು ಬಿಡಿ ಬಿಡಿಯಾಗಿ ಸಿಗುತ್ತಿದೆ. ಅವುಗಳಿಗೆ ಸಮಗ್ರ ರೂಪ ನೀಡುವ ದೃಷ್ಟಿಯಿಂದ ಸಂಪುಟ ರೂಪದಲ್ಲಿ ಹೊರತರಬೇಕು ಎಂಬ ಉದ್ದೇಶವನ್ನು ಇಲಾಖೆ ಹೊಂದಿದೆ. ರಾಜ್ಯದ ಎಲ್ಲಾ ತತ್ವಪದಕಾರರ ಸಮಗ್ರ ಸಾಹಿತ್ಯದ 50 ಸಂಪುಟಗಳ ಪ್ರಕಟ ಣೆಗಾಗಿ ₨ 3.75 ಕೋಟಿ ಮೊತ್ತವನ್ನು ಮೀಸಲಿರಿಸಲಾಗಿದೆ. ₨ 1.6 ಕೋಟಿ ಮೊತ್ತ ಈಗಾಗಲೇ ಬಳಕೆಯಾಗಿದೆ’ ಎಂದರು.
15 ಭಾಷೆಗಳಲ್ಲಿ ಅನುವಾದ: ಕನಕದಾಸರನ್ನು ಕುರಿತು ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣಗಳನ್ನು ಏರ್ಪಡಿಸುವುದರೊಂದಿಗೆ ಗೊಂಬೆಯಾಟ, ಅನಿಮೇಷನ್ ಕಿರುಚಿತ್ರ, ಕಾವ್ಯಗಳ ಸ್ವರಪ್ರಸ್ತಾರದ ಪುಸ್ತಕ, ರಸಗ್ರಹಣ ಶಿಬಿರ, ಕಮ್ಮಟಗಳು, ಕಾವ್ಯ ವಾಚಿಕೆ, ಪಾರಿಭಾಷಿಕ ಪದ ವಿವರಣಾ ಕೋಶ, ಕೀರ್ತನೆಗಳನ್ನು 15 ಭಾಷೆಗಳಿಗೆ ಅನುವಾದಿಸುವ ಕಾರ್ಯ... ಹೀಗೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿ ರುವ ಕೇಂದ್ರವು ತನ್ನೆಲ್ಲ ಚಟುವಟಿಕೆಗಳ ಮಾಹಿತಿ, ಆಡಿಯೊ ಮತ್ತು ವಿಡಿಯೊಗಳನ್ನು ಈ ಮಾಹಿತಿ ಕಣಜದಲ್ಲಿ ಹಾಕಲು ಮುಂದಾಗಿದೆ.
‘ಕನಕದಾಸರ ಸಮಗ್ರ ಸಾಹಿತ್ಯವನ್ನು ಹಾಗೂ 300ಕ್ಕೂ ಹೆಚ್ಚು ಕೀರ್ತನೆಗಳನ್ನು ಇಂಗ್ಲಿಷ್ ಸೇರಿದಂತೆ 15 ಭಾಷೆಗಳಲ್ಲಿ ಅನುವಾದಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 2.75 ಕೋಟಿ ಹಣವನ್ನು ಮೀಸಲಿರಿಸಲಾಗಿದೆ’ ಎಂದು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು.
‘ಸಚಿತ್ರಕೋಶ ಎಂಬ ಹೆಸರಿನಲ್ಲಿ ಮಕ್ಕಳಿಗಾಗಿ ಆರು ಸಂಪುಟಗಳಲ್ಲಿ ಕನಕ ಗೊಂಬೆಯಾಟ ಸಿದ್ಧಪಡಿಸಲಾಗುತ್ತಿದೆ. 90 ನಿಮಿಷಗಳ ಆಟವು ವಿಡಿಯೊ ರೂಪದಲ್ಲಿ ಜಾಲತಾ ಣದಲ್ಲಿ ಲಭ್ಯವಿರುತ್ತದೆ’ ಎಂದೂ ಅವರು ನುಡಿದರು.
‘ಸಂತಕವಿ ಕುರಿತು ಒಂದು ಕಿರುಚಿತ್ರ ತಯಾರಿಸಲಾಗಿದ್ದು ಅದನ್ನು ಕೂಡ ವೆಬ್ಸೈಟ್ನಲ್ಲಿ ಹಾಕಲಾಗುವುದು. ಜೊತೆಗೆ ‘ಕನಕ ಕಾವ್ಯ ವಾಚಿಕೆ’ ಎನ್ನುವ ಯೋಜನೆಯಲ್ಲಿ 316 ಕೀರ್ತನೆಗಳನ್ನು ವಿದ್ವಾಂಸರಿಂದ ವಾಚಿಸಿ ಧ್ವನಿಮುದ್ರಿಸಿ ಕೊಳ್ಳಲಾಗಿದೆ. ಕನಕ ಸಾಹಿತ್ಯ ಪ್ರಿಯರು ಈ ವಾಚಿಕೆಯ ಆಡಿಯೊವನ್ನು ಕೂಡ ಜಾಲತಾಣದಲ್ಲಿ ಕೇಳಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.