ಬೆಂಗಳೂರು: ‘ಯು.ಆರ್. ಅನಂತಮೂರ್ತಿ ಅವರಂಥ ವೈಚಾರಿಕ ಪ್ರಜ್ಞೆಯ ಸಾಹಿತಿಗೂ ಬ್ರಾಹ್ಮಣ್ಯವನ್ನು ದಾಟಲು ಸಾಧ್ಯವಾಗಲಿಲ್ಲ. ಇದಕ್ಕೆ ಅವರ ಅಂತ್ಯ ಸಂಸ್ಕಾರ ವೈಖರಿಯೇ ಉದಾಹರಣೆ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಅಭಿಪ್ರಾಯಪಟ್ಟರು.
ನಗರದ ಹೋಟೆಲ್ವೊಂದರಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯು ಆಯೋಜಿಸಿದ್ದ ಡಾ.ಯು.ಆರ್.ಅನಂತಮೂರ್ತಿ ಅವರಿಗೆ ನುಡಿನಮನ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಸ್ಕಾರ ಕಾದಂಬರಿಯ ಪ್ರಾಣೇಶಾಚಾರ್ಯ ಕೊನೆಗೂ ಪ್ರಾಣೇಶಾಚಾರ್ಯನಾಗಿಯೇ ಉಳಿದ. ಗೆರೆ ದಾಟಲು ಸಾಧ್ಯವಾಗಲಿಲ್ಲ. ಒಬ್ಬ ಮಾಧ್ವ ಬ್ರಾಹ್ಮಣನಾಗಿ ಹುಟ್ಟಿ ಅವರ ಅಂತರಂಗದ ಇಚ್ಛೆ ಪ್ರಕಾರವೇ ಒಬ್ಬ ಮಾಧ್ವ ಬ್ರಾಹ್ಮ-ಣನ ಅಂತ್ಯ ಸಂಸ್ಕಾರವನ್ನು ಅನಂತಮೂರ್ತಿ ಪಡೆದರು’ ಎಂದರು.
ಕಾಂಗ್ರೆಸ್ ನಾಯಕ ವಿ.ಆರ್. ಸುದರ್ಶನ್ ಮಾತನಾಡಿ, ‘ಕಲಾಗ್ರಾಮವನ್ನು ಸ್ಮಶಾನವನ್ನಾಗಿ ಮಾಡಲಾಗುತ್ತಿದೆ ಎಂಬ ವಿವಾದ ಎದ್ದಿದೆ. ಈ ರೀತಿ ಹೇಳುವವರು ಹಿಂದೆಯೇ ಸಲಹೆ ನೀಡಬೇಕಿತ್ತು. ನನ್ನ ಪ್ರಕಾರ ಸಾಧಕರ ಹುಟ್ಟೂರಿನಲ್ಲಿಯೇ ಅಂತ್ಯ ಸಂಸ್ಕಾರ ನಡೆಯಬೇಕು. ಆಗ ಗೊಂದಲ ಇರುವುದಿಲ್ಲ. ಈ ಬಗ್ಗೆ ಸರ್ಕಾರ ನೀತಿ ರೂಪಿಸಬೇಕು’ ಎಂದರು.
‘ಅನಂತಮೂರ್ತಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರೆ ಕನ್ನಡಕ್ಕೆ ಮತ್ತಷ್ಟು ಒಳ್ಳೆಯದಾಗುತ್ತಿತ್ತು. ಆದರೆ, ಈ ಅವಕಾಶವನ್ನು ರಾಜಕೀಯ ಪಕ್ಷಗಳು ಕಳೆದುಕೊಂಡವು’ ಎಂದು ವಿಷಾದ ವ್ಯಕ್ತಪಡಿಸಿದರು.
ಸುದರ್ಶನ್ ಅವರ ಮಾತಿಗೆ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಕೂಡ ದನಿಗೂಡಿಸಿ, ‘ವಿದ್ಯಾ ಕೇಂದ್ರವಾದ ಜ್ಞಾನಭಾರತಿ ಆವರಣವನ್ನು ಸ್ಮಶಾನವಾಗಿಸಬಾರದು’ ಎಂದರು.
ಸಾಹಿತಿ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಮಾತನಾಡಿ, ‘ಬದುಕಿದ ರೀತಿ ಏನೇ ಇರಬಹುದು. ಆದರೆ, ಹುಟ್ಟು ಹಾಗೂ ಸಾವು ನಮ್ಮ ಕೈಯಲ್ಲಿಲ್ಲ. ಹಾಗಾಗಿ ಹುಟ್ಟಿದಾಗ, ಸತ್ತಾಗ ಏನು ನಡೆಯಿತು ಎಂಬ ವಿಚಾರ ಬೇಡ. ಬದುಕಿದ್ದಾಗ ಎಷ್ಟು ಮುಖ್ಯವಾಗುತ್ತಾನೋ ಸತ್ತಾಗಲೂ ಅಷ್ಟೇ ಮುಖ್ಯವಾದರೆ ಆತ ನಿಜವಾದ ಮನುಷ್ಯ. ಅನಂತಮೂರ್ತಿ ಅವರು ಮುಖವಾಡ ಹೊತ್ತ ಸಾಹಿತಿ ಆಗಿರಲಿಲ್ಲ’ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.