ADVERTISEMENT

‘ಮಧುಮೇಹದ ರಾಜಧಾನಿಯಾದ ಉದ್ಯಾನ ನಗರಿ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:49 IST
Last Updated 20 ಅಕ್ಟೋಬರ್ 2014, 19:49 IST

ಬೆಂಗಳೂರು: ‘ದಿನೇ ದಿನೇ ಉದ್ಯಾನ ನಗರಿಯು ಮಧುಮೇಹ ರಾಜಧಾನಿಯಾಗಿ ಬದಲಾಗುತ್ತಿದೆ. ನಗರದ ಪ್ರತಿ ಆರು ಜನರ ಪೈಕಿ ಒಬ್ಬರಲ್ಲಿ ಮಧುಮೇಹ ಕಾಯಿಲೆ ಕಾಣಿಸಿಕೊಳ್ಳುತ್ತಿದೆ’ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಸೋಮವಾರ ನಡೆದ ನೂತನ­ವಾಗಿ ನಿರ್ಮಿಸಿರುವ ‘ಕಾಲಿನ ಗಾಯದ ಅತ್ಯಾಧು­ನಿಕ ಚಿಕಿತ್ಸಾ ಕೇಂದ್ರ’ದ ಉದ್ಘಾಟನಾ ಸಮಾರಂಭ­ದಲ್ಲಿ ಅವರು ಮಾತನಾಡಿದರು. ‘ವಂಶವಾಹಿ ಮತ್ತು ಬದಲಾದ ಜೀವನ ಶೈಲಿ ಸೇರಿದಂತೆ ಹಲವಾರು ಕಾರಣಗಳಿಂದ ಯುವ ಜನರಲ್ಲಿ ಮಧುಮೇಹ ಪ್ರಮಾಣ ಹೆಚ್ಚುತ್ತಿದೆ. ವಿಶೇಷ­ವಾಗಿ ಈ ಕಾಯಿಲೆಯಿಂದ ಜನರಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು ಮಾತ್ರವಲ್ಲದೇ, ಹೃದಯಾ­ಘಾತ, ಕಾಲಿನ ಗಾಯ, ಮೂತ್ರನಾಳ ಸೋಂಕು, ಕಿಡ್ನಿ ವೈಫಲ್ಯ... ಹೀಗೆ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಅವುಗಳಲ್ಲಿ ಕಾಲಿನ ಗಾಯದ ಸಮಸ್ಯೆ ಪ್ರಮುಖವಾಗಿದೆ’ ಎಂದು ಹೇಳಿದರು.

‘ಮಧುಮೇಹ ಪೀಡಿತರಲ್ಲಿ ಶೇ 15–20 ರಷ್ಟು ಜನರಲ್ಲಿ ಕಾಲಿನ ಗಾಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಧುಮೇಹ ಕಾಯಿಲೆ ನರ ಮಂಡಲದ ವ್ಯವಸ್ಥೆ ಮೇಲೆ ಪರಿಣಾಮ ಬೀರು­ತ್ತದೆ. ಪರಿಣಾಮ, ಸ್ಪರ್ಶ ಸಂವೇದನೆ ಕಳೆದು ಕೊಳ್ಳುವ ಕಾಲಿನಲ್ಲಿ ಆಗುವ ಗಾಯಗಳು ಅರಿವಿಗೆ ಬರುವು­ದಿಲ್ಲ’ ಎಂದು ತಿಳಿಸಿದರು.

‘ಈ ನಿಟ್ಟಿನಲ್ಲಿ ಕಾಲಿನ ಗಾಯದಿಂದ ಬಳಲುವ ನಗರದ ಜನರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಮಯ್ಯ ಆಸ್ಪತ್ರೆಯು ಅಮೆರಿಕದ ಕಾನ್ವಾಟೆಕ್‌ ಕಂಪೆನಿಯ ಸಹಯೋಗದಲ್ಲಿ ಈ ಅತ್ಯಾಧುನಿಕ ಚಿಕಿತ್ಸಾ ಕೇಂದ್ರ ತೆರೆದಿದೆ’  ಎಂದು ನರೇಶ್ ಹೇಳಿದರು.

ರಕ್ತನಾಳ ಚಿಕಿತ್ಸಾ ತಜ್ಞ ಡಾ.ಸಂಜಯ ದೇಸಾಯಿ ಮಾತನಾಡಿ, ‘ದೇಶದಲ್ಲಿ ಕಾಲಿನ ಗಾಯಗಳನ್ನು ವಿಶೇಷವಾಗಿ ಉಪಚರಿಸುವಂತಹ ಚಿಕಿತ್ಸಾ ಕೇಂದ್ರಗಳು ವಿರಳವಾಗಿವೆ. ಇದು  ಅತ್ಯಾ­ಧು­ನಿಕ ಯಂತ್ರೋಪಕರಣಗಳನ್ನು ಹೊಂದಿ­ರುವ ಎರಡನೇ ಕೇಂದ್ರವಾಗಿದೆ’ ಎಂದು ತಿಳಿಸಿದರು. ಸಮಾರಂಭದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಂ ಅವರು ನೂತನ ಕೇಂದ್ರವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.