ಬೆಂಗಳೂರು: ‘ಭಯೋತ್ಪಾದಕರ ವಿರುದ್ಧ ನಿರಂತರ ಹೋರಾಟ ನಡೆಸಿದ ಮಲಾಲಾ ಅವರ ಬದುಕು ಜಗತ್ತಿಗೆ ಮಾದರಿಯಾಗಿದೆ’ ಎಂದು ಕವಿ ಸಿದ್ದಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
ಆಕೃತಿ ಪುಸ್ತಕ ಪ್ರಕಾಶನವು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪಾಕಿಸ್ತಾನದ ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸಫ್ ಝಾಯಿ ಅವರ ಆತ್ಮಕಥೆಯ ಕನ್ನಡ ಅನುವಾದ ‘ನಾನು ಮಲಾಲಾ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಭಯೋತ್ಪಾದಕರ ವಿರುದ್ಧ ಹೋರಾಡಿ ಮಲಾಲಾ ಜಗತ್ತಿಗೆ ಮಾದರಿಯಾದರು. ಅವರ ಆದರ್ಶಗಳನ್ನಿಟ್ಟುಕೊಂಡು ಅಸ್ಪೃಶ್ಯತೆ ಎಂಬ ಸಾಮಾಜಿಕ ವಿಕೃತಿಯ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ’ ಎಂದರು.
‘ಭಯೋತ್ಪಾದನೆ ಕೇವಲ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ನಾನಾ ಭಾಗಗಳಲ್ಲಿ ಹರಡಿಕೊಂಡಿದೆ. ಈ ಕೃತಿಯಲ್ಲಿ ಮಲಾಲಾ ಅವರು ತನಗಾದ ಕಷ್ಟಗಳನ್ನೆಲ್ಲ ಹೇಳಿಕೊಂಡಿದ್ದಾರೆ. ತನ್ನ ಜೀವನವನ್ನು ಪಣಕ್ಕಿಟ್ಟು ವಿದ್ಯಾಭ್ಯಾಸ ಮಾಡಿ ಇತರರು ವಿದ್ಯಾಭ್ಯಾಸ ಮಾಡುವಂತೆ ಪ್ರೇರೇಪಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಗುಂಡಿಗೆ ಎದೆಯೊಡ್ಡಿ ಸಾವನ್ನು ಗೆದ್ದವರು ಅವರು, ಭಯೋತ್ಪಾದನೆ ವಿರುದ್ಧ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮಾಡಿದ ಮಲಾಲಾ ಅವರ ಧೈರ್ಯ ಮತ್ತು ದಿಟ್ಟತನ ಅನುಕರಣೀಯವಾದದ್ದು’ ಎಂದರು.
‘ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಶೋಷಣೆಗಳು ಉಳಿದುಕೊಂಡಿವೆ. ಕೆಲ ಸಮುದಾಯವನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುವುದು ಕೂಡ ಒಂದು ರೀತಿಯಲ್ಲಿ ಭಯೋತ್ಪಾದನೆ. ಇಂತಹ ಶೋಷಣೆಯ ವಿರುದ್ಧ ಹೋರಾಡಲು ನಮ್ಮ ಮನಸ್ಸುಗಳು ಜಾಗೃತಗೊಳಿಸಬೇಕು’ ಎಂದರು.
ಸಾಹಿತಿ ಬೊಳುವಾರು ಮಹಮದ್ ಕುಂಞ, ‘ಪ್ರಜಾವಾಣಿ’ ಮುಖ್ಯ ಉಪಸಂಪಾದಕ ಡಾ.ಜಿ.ಬಿ.ಹರೀಶ್, ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಉಪಸ್ಥಿತರಿದ್ದರು. ಬೆಲೆ ರೂ. 250.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.