ADVERTISEMENT

‘ಶಿಲಾಶಾಸನಗಳ ಸಂರಕ್ಷಣೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2015, 19:53 IST
Last Updated 23 ಸೆಪ್ಟೆಂಬರ್ 2015, 19:53 IST
ಉಮಾಶ್ರೀ ಅವರು ಕಾರ್ಯಕ್ರಮದಲ್ಲಿ ಪುರಾತನ ಶಿಲ್ಪವೊಂದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಉಮಾಶ್ರೀ ಅವರು ಕಾರ್ಯಕ್ರಮದಲ್ಲಿ ಪುರಾತನ ಶಿಲ್ಪವೊಂದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು   

ಬೆಂಗಳೂರು: ‘ದೇಶದ ಇತಿಹಾಸ, ಪರಂಪರೆ ಪ್ರತಿಬಿಂಬಿಸುವ ಪಳೆಯುಳಿಕೆಗಳಾಗಿರುವ ಶಿಲಾಶಾಸನಗಳನ್ನು ಜತನದಿಂದ ಸಂರಕ್ಷಿಸುವ ಕಾರ್ಯ ಆಗಬೇಕಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.

ಪುರಾತತ್ವ ಇಲಾಖೆ ಕಸ್ತೂರಿ ಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಬುಧವಾರ ಆಯೋಜಿಸಿದ್ದ ಬೆಂಗಳೂರು ವಸ್ತುಸಂಗ್ರಹಾಲಯದ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈಜ್ಞಾನಿಕ ಬೆಳವಣಿಗೆಗಳು ನಮ್ಮ  ಪರಂಪರೆ, ಸಂಸ್ಕೃತಿಯನ್ನು ಎಲ್ಲೋ ಒಂದು ಕಡೆ  ಆಕ್ರಮಿಸಿಕೊಳ್ಳುತ್ತಿರುವಂತೆ ಭಾಸವಾಗುತಿದೆ. ಈ ಹೊತ್ತಿನಲ್ಲಿ ವೈಜ್ಞಾನಿಕ ಪ್ರಗತಿಯ ಜತೆಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

‘ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಸಂದರ್ಭಗಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸುವ ಸಲುವಾಗಿ ‘ಪ್ರಾಚ್ಯ-ಪ್ರಜ್ಞೆ’  ಎಂಬ ಯೋಜನೆ ಜಾರಿಗೆ ತರಲಾಯಿತು. ಮಕ್ಕಳಿಗೆ ತಾವು ನೋಡಿದಂತಹ  ಐತಿಹಾಸಿಕ ಸ್ಥಳಗಳ ಬಗ್ಗೆ ರಸಪ್ರಶ್ನೆ, ಪ್ರಶ್ನಾವಳಿ ಮುಂತಾದ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರಿಗೆ ಇತಿಹಾಸದ ಬಗ್ಗೆ ಸ್ಪಷ್ಟ ಆಳವಾದ ಜ್ಞಾನ ಮೂಡಿಸುವುದು ಯೋಜನೆ ಉದ್ದೇಶವಾಗಿದೆ’ ಎಂದರು.

‘ಪತ್ರಗಾರ, ಪ್ರಾಚ್ಯವಸ್ತು, ಮತ್ತು ಪರಂಪರೆ ಇಲಾಖೆಗೆ ಕಾಯಕಲ್ಪ ನೀಡುವ ಸಂಬಂಧ  ಇತಿಹಾಸ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿ ಸಲಾಗುವುದು’ ಎಂದು ತಿಳಿಸಿದರು.

*

ಶಿಶು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ
‘ಅಂಗನವಾಡಿಗಳಲ್ಲಿ ನೀಡಲಾಗುತ್ತಿರುವ ಆರಂಭಿಕ ಶಿಶು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವೆ ಉಮಾಶ್ರೀ ತಿಳಿಸಿದರು. ಅಕ್ಷರ ಫೌಂಡೇಶನ್‌ನಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ‘ಅಂಗನವಾಡಿಗಳಲ್ಲಿ ಶಿಶುಗಳಿಗೆ ನೀಡಲಾಗುತ್ತಿರುವ ಆರಂಭಿಕ ಶಿಕ್ಷಣದ ಗುಣಮಟ್ಟ ಸರಿಯಿಲ್ಲ ಎಂಬುದು ಮನವರಿಕೆಯಾಗಿದ್ದು, ಅದನ್ನು ಸರಿಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT