ADVERTISEMENT

‘ಸಂಗೀತ ಪೋಷಿಸಿದ ಆಕಾಶವಾಣಿ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಬೆಂಗಳೂರು: ‘ಶಾಸ್ತ್ರೀಯ ಸಂಗೀತಕ್ಕೆ ರಾಜರ ಮತ್ತು ಜಮೀನ್ದಾರರ ಆಶ್ರಯ ತಪ್ಪಿದ ತರುವಾಯ ಅದನ್ನು ನಿರಂತರವಾಗಿ ಪೋಷಿಸುತ್ತ, ಅಸ್ಮಿತೆಯ ಜತೆಗೆ ಪ್ರಮುಖ ಸ್ಥಾನ ಕೊಟ್ಟ ಕೀರ್ತಿ ಆಕಾಶವಾಣಿಗೆ ಸಲ್ಲುತ್ತದೆ’ ಎಂದು ಆಕಾಶವಾಣಿ ಬೆಂಗಳೂರು ನಿಲಯದ ನಿವೃತ್ತ ನಿರ್ದೇಶಕ ಎನ್.ಎಸ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಆಕಾಶ­ವಾಣಿಯ ಬೆಂಗಳೂರು ನಿಲಯ ಆಯೋಜಿ­ಸಿದ್ದ ಕಾರ್ಯಕ್ರಮದಲ್ಲಿ ಆಕಾಶ­ವಾಣಿಯ ಧ್ವನಿಭಂಡಾರದಿಂದ ಆಯ್ದ ವಿದ್ವಾನ್ ಡಾ.ಆರ್.ಕೆ. ಶ್ರೀಕಂಠನ್ ಅವರ ಗಾಯನದ ಸಿ.ಡಿ ‘ರಾಗಸುಧಾರಸ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಬಹುಕಾಲ ಆಕಾಶವಾಣಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಶ್ರೀಕಂಠನ್ ಅವರು ವೈವಿಧ್ಯಮಯ ಸಂಗೀತ ಕಾರ್ಯ­ಕ್ರಮಗಳನ್ನು ರೂಪಿಸುವ ಮೂಲಕ ಹೊಸ ಹೊಸ ರಚನೆಗಳನ್ನು ಪರಿಚಯಿಸಿದರು’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.

‘ಕಚೇರಿಗಳಲ್ಲಿ ತ್ರಿಮೂರ್ತಿಗಳ ರಚನೆಗೆ ಸರಿಸಮನಾಗಿ ದಾಸರ ಪದ­ಗಳನ್ನು ಹಾಡಬೇಕೆ? ಎಂಬ ಜಿಜ್ಞಾಸೆಯ ನಡುವೆ, ದಾಸರ ಪ್ರತಿ ರಚನೆಯ ಔಚಿತ್ಯ ಅರಿತು, ಸಾಹಿತ್ಯಕ್ಕೆ ಅಪಚಾರವಾಗ­ದಂತೆ ಸಂಗೀತ ಗೌಣ ವಾಗಿಸಿ, ಸಂಪ್ರದಾ­ಯಬದ್ದವಾಗಿ ಹಾಡುವ ಕಷ್ಟದ ಸಾಧನೆ ಮಾಡಿದ ಮೇರು ಕಲಾವಿದ ಶ್ರೀಕಂಠನ್’ ಎಂದು ಬಣ್ಣಿಸಿದರು.

ಶ್ರೀಕಂಠನ್ ಪುತ್ರ ವಿದ್ವಾನ್ ರುದ್ರಪಟ್ಣಂ ಎಸ್.ರಮಾಕಾಂತ್ ಅವರು ಮಾತ­ನಾಡಿ, ‘ಹೊಣೆಗಾರಿಕೆ ಮತ್ತು ದಕ್ಷತೆ­ಯಿಂದ ವೈವಿಧ್ಯಪೂರ್ಣ ಕಾರ್ಯ­ಕ್ರಮಗಳನ್ನು ರೂಪಿಸಿ, ಎಲ್ಲ ವರ್ಗದ­ವ­ರಿಗೆ ತಲುಪುವಂತೆ ಮಾಡಿದ ಪ್ರಬಲ ಸಮೂಹ ಸಂವಹನ ಮಾಧ್ಯಮ ಆಕಾಶವಾಣಿ’ ಎಂದು ಶ್ಲಾಘಿಸಿದರು.

ಬೆಂಗಳೂರಿನ ನಿಲಯ ನಿರ್ದೇಶಕ ಬಸವರಾಜ ಸಾದರ, ಉಪ ನಿರ್ದೇಶಕ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.