ADVERTISEMENT

‘ಸೈಬರ್‌ ಅಪರಾಧ ಪತ್ತೆ ತಂತ್ರಜ್ಞಾನ ವಿನಿಮಯ’

ಗೃಹಸಚಿವರ ಜತೆ ಆಸ್ಟ್ರೇಲಿಯಾ ನಿಯೋಗ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 25 ಮೇ 2016, 19:32 IST
Last Updated 25 ಮೇ 2016, 19:32 IST

ಬೆಂಗಳೂರು: ರಸ್ತೆ ಸುರಕ್ಷತೆ ಹಾಗೂ ಪೊಲೀಸ್‌ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ಆಸ್ಟ್ರೇಲಿಯಾ  ಹೈಕಮಿಷನರ್ ಹರಿಂದರ್ ಸಿಧು ನೇತೃತ್ವದ ನಿಯೋಗವು ಗೃಹ ಸಚಿವ ಡಾ.ಜಿ.ಪರಮೇಶ್ವರ್‌  ಜತೆ ಬುಧವಾರ ಸಮಾಲೋಚನೆ ನಡೆಸಿತು.

ನಿಯೋಗದ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್‌, ‘ಸೈಬರ್‌ ಅಪರಾಧ ಪತ್ತೆ ಹಾಗೂ ವಿಧಿವಿಜ್ಞಾನ ಕ್ಷೇತ್ರಗಳಲ್ಲಿ ಬಳಕೆಯಾಗುವ ಆಧುನಿಕ  ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳುವ  ಬಗ್ಗೆ ಮಾತುಕತೆ ನಡೆಸಿದ್ದೇವೆ. ಬೆಂಗಳೂರಿನ ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ವಾಹನ ಸಂಚಾರ ನಿಯಂತ್ರಣದ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದರು.

ಕ್ಯಾನ್‌ಬೆರಾದಲ್ಲಿ ನಡೆಯುವ ರಸ್ತೆ ಸುರಕ್ಷತಾ  ಸಮ್ಮೇಳನಕ್ಕೆ  ರಾಜ್ಯದಿಂದ ಪ್ರತಿನಿಧಿಗಳನ್ನು ಕಳುಹಿಸುವಂತೆ ಆಸ್ಟ್ರೇಲಿಯಾದ ನಿಯೋಗವು ಆಹ್ವಾನ ನೀಡಿದೆ.

ಆರೋಪ ನಿಜವಿದ್ದರೆ ಕ್ರಮ: ‘ಮುಖ್ಯಮಂತ್ರಿ ಕಚೇರಿಯ ಭದ್ರತಾ ಸಿಬ್ಬಂದಿ ದಲಿತ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಈಗಾಗಲೇ ನಗರ ಪೊಲೀಸ್‌ ಕಮಿಷನರ್ ಜೊತೆ ಮಾತನಾಡಿದ್ದೇನೆ. ಅಂತಹ ಪ್ರಸಂಗ ನಡೆದಿಲ್ಲ ಎಂದು ಅವರು  ಮಾಹಿತಿ ನೀಡಿದ್ದಾರೆ.

ಸಣ್ಣ ವಿಚಾರದಂತೆ ಕಂಡರೂ  ಇಂದೊಂದು ಗಂಭೀರವಾದ ವಿಚಾರ. ಕುಮಾರಸ್ವಾಮಿ ಅವರು ಮಾಡಿರುವ ಆರೋಪ  ನಿಜವಾಗಿದ್ದರೆ   ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

‘ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ನಮ್ಮಗಿಲ್ಲ. ಮಹಿಳೆಯ ಕುಟುಂಬಕ್ಕೆ ಸಹಾಯಹಸ್ತ ನೀಡಲು   ಬದ್ಧ. ಮುಖ್ಯಮಂತ್ರಿ ಅವರೂ  ಇದನ್ನು ಸ್ಪಷ್ಟಪಡಿಸಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.