ಬೆಂಗಳೂರು: ‘ದೇಶದಲ್ಲಿ ದಿನೇ ದಿನೇ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಲ್ಲಿ ಸೈಬರ್ ಭದ್ರತಾ ಅಧಿಕಾರಿಗಳ ಸಂಖ್ಯೆ ಏರಿಸಬೇಕು’ ಎಂದು ಲೇಖಕ ಅಂಕಿತ್ ಫಾಡಿಯಾ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಏರ್ಪಡಿಸಿದ್ದ ಪೆಂಗ್ವಿನ್ ಇಂಡಿಯಾ ಪ್ರಕಾಶನದ ‘ಸೋಷಿಯಲ್ 50 ವೇಸ್ ಟು ಇಂಪ್ರೂವ್ ಯೂವರ್ ಪ್ರೊಫೆಷನಲ್ ಲೈಫ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರದ ಪ್ರಕಾರ ಐಟಿ ಮೂಲಸೌಕರ್ಯ ಸಂರಕ್ಷಣೆಗೆ 4.7 ಲಕ್ಷ ಸೈಬರ್ ಭದ್ರತಾ ವೃತಿಪರರ ಅಗತ್ಯವಿದೆ. ಭಾರತದಲ್ಲಿ ಕೆಲವೇ ಕಾಲೇಜುಗಳಲ್ಲಿ ಮಾತ್ರ ಸೈಬರ್ ಭದ್ರತೆ ಕುರಿತಾದ ಕೋರ್ಸ್ಗಳು ಲಭ್ಯವಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.
‘ಕಳೆದ ನಾಲ್ಕು ತಿಂಗಳಲ್ಲಿ 6700 ಭಾರತೀಯ ಸೈಟ್ಗಳನ್ನು ಕನ್ನ ಹಾಕಲಾಗಿದೆ. ವಿದ್ಯುತ್ ಸ್ಥಾವರಗಳು ಅಣೆಕಟ್ಟುಗಳು, ಗ್ಯಾಸ್ ಪೈಪ್ಲೈನ್ಗಳು, ಉಕ್ಕು ಘಟಕಗಳು ಕೂಡಾ ಸೈಬರ್ ದಾಳಿಗೆ ಸಿಲುಕಿಕೊಳ್ಳುವ ಭೀತಿ ಎದುರಿಸುತ್ತಿವೆ’ ಎಂದರು. ‘ಈ ಪುಸ್ತಕದಲ್ಲಿ ಇಂಟರ್ನೆಟ್ ಆಪ್ಸ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೇಗಿರಬೇಕೆಂಬ ಕೆಲವು ಅಗತ್ಯವಾದ ಸಲಹೆ ಸೂಚನೆಗಳನ್ನು ತಿಳಿಸಿದ್ದೇನೆ’ ಎಂದರು. ಪುಸ್ತಕದ ಬೆಲೆ 250.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.