ಬೆಂಗಳೂರು: ‘ಒಂದು ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರೆ, ಮತ್ತೊಂದು ಕೋರ್ಟ್ ಅವರನ್ನು ಬಿಡುಗಡೆ ಮಾಡುತ್ತದೆ. ನ್ಯಾಯದಾನ ವ್ಯವಸ್ಥೆ ಹಣವಂತರ ಪರವಾಗಿದ್ದರೆ ದಲಿತರಿಗೆ ನ್ಯಾಯ ದೊರೆಯುವುದಿಲ್ಲ’ ಎಂದು ಆಂಧ್ರ ಪ್ರದೇಶದ ಹಿರಿಯ ವಕೀಲ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಬೊಜ್ಜಾ ತಾರಕಂ ಹೇಳಿದರು.
ಕರ್ನಾಟಕ ಜನಶಕ್ತಿ ಮತ್ತು ಕಂಬಾಲಪಲ್ಲಿ ಹೋರಾಟ ಸಮಿತಿಯು ಭಾನುವಾರ ಆಯೋಜಿಸಿದ್ದ ‘ದಲಿತರಿಗೆಟುಕದ ನ್ಯಾಯ: ಸವಾಲುಗಳು ಹಾಗೂ ಸಾಧ್ಯತೆಗಳು’ ವಿಷಯದ ಕುರಿತ ರಾಷ್ಟ್ರೀಯ ವಿಚಾರಮಂಥನವನ್ನು ಉದ್ಘಾಟಿಸಿ ಮಾತನಾಡಿದರು.
‘ದಲಿತರ ಮೇಲೆ ದೇಶದಲ್ಲಿ ನಡೆದ ಹತ್ಯಾ ಕಾಂಡ ಪ್ರಕರಣಗಳಿಗೆ ಪೂರಕವಾದ ಸಾಕ್ಷಿಗಳು, ಹತ್ತಿರದಿಂದ ನೋಡಿದ ಪ್ರತ್ಯಕ್ಷದರ್ಶಿಗಳು ಇದ್ದರೂ ದಲಿತರಿಗೆ ನ್ಯಾಯಾಲಯದಲ್ಲಿ ನ್ಯಾಯ ದೊರೆ ಯುತ್ತಿಲ್ಲ. ಚುಂಡೂರು ಹಾಗೂ ಕಂಬಾಲಪಲ್ಲಿ ಪ್ರಕರಣಗಳಲ್ಲಿ ಬಲವಾದ ಸಾಕ್ಷಿಗಳಿದ್ದರೂ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ’ ಎಂದರು.
‘ಇಂದು ಉನ್ನತ ನ್ಯಾಯಾಲಯಗಳು ಮೇಲ್ವರ್ಗಗಳ ಅಗ್ರಹಾರಗಳಾಗಿವೆ ಎಂದು 2012 ಎಸ್ಸಿ/ಎಸ್ಟಿ ಆಯೋಗ ವರದಿ ಹೇಳಿದೆ. 2012ರಲ್ಲಿ ದೇಶದಲ್ಲಿದ್ದ 21 ಹೈಕೋರ್ಟ್ಗಳಲ್ಲಿ ಸುಮಾರು 850ಕ್ಕೂ ಹೆಚ್ಚು ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಎಸ್ಸಿ/ ಎಸ್ಟಿ ವರ್ಗಕ್ಕೆ ಸೇರಿದವರು 24 ಜನ ಮಾತ್ರ ಎಂದು ವರದಿ ತಿಳಿಸಿದೆ. ಇದರಿಂದ ನ್ಯಾಯಾಲ ಯದಲ್ಲಿ ನಂಬಿಕೆ ಇರಿಸಿದ್ದ ದಲಿತರಿಗೆ ನ್ಯಾಯ ಸಿಗುವುದೇ ಎಂಬ ಸಂದೇಹ ಮೂಡುತ್ತಿದೆ’ ಎಂದು ವಕೀಲ ಶಿವನಾಗೇಶ್ವರ್ ರಾವ್ ಹೇಳಿದರು.
ಕಾರ್ಯಕ್ರಮದಲ್ಲಿ ಬಿಹಾರ್ನ ಬೇಲಾ ಭಾಟಿಯಾ, ಕರ್ನಾಟಕ ಜನಶಕ್ತಿ ಸಂಸ್ಥೆಯ ಪ್ರಧಾನ ಸಂಚಾಲಕಿ ಗೌರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.