ಬೆಂಗಳೂರು: ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ನಿಂಗಮ್ಮ ಅವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು (ಎನ್ಡಿಆರ್ಎಫ್) 41 ಕಿ.ಮೀ. ಶೋಧ ಕಾರ್ಯ ನಡೆಸಿದ್ದರೂ ಅವರು ಪತ್ತೆಯಾಗಿಲ್ಲ.
ಇದೇ 13ರಂದು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಪುಷ್ಪಾ ಶವ ಕುಂಬಳಗೋಡು ಸೇತುವೆ ಬಳಿ ಭಾನುವಾರ ಪತ್ತೆಯಾಗಿತ್ತು.
‘ನಿಂಗಮ್ಮ ಅವರಿಗಾಗಿ ಬಿಡದಿ ಹೋಬಳಿಯ ಸಾದರಮಂಗಲದವರೆಗೂ ವೃಷಭಾವತಿ ಕಾಲುವೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೂ ಅವರು ಪತ್ತೆಯಾಗಿಲ್ಲ. ಕಾಲುವೆಯ ಆಳ ಇರುವ ಪ್ರದೇಶಗಳಲ್ಲಿ ಶವ ಸಿಕ್ಕಿಕೊಂಡಿರುವ ಸಾಧ್ಯತೆ ಇದೆ. ಅಂತಹ 22 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಶೋಧ ಕಾರ್ಯ ನಡೆಸಲು ನಿರ್ಧರಿಸಲಾಗಿದೆ’ ಎಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದರು.
ಪರಿಹಾರದ ಚೆಕ್ ವಿತರಣೆ:
ಜೆ.ಸಿ.ನಗರದಲ್ಲಿ ಮಳೆಯಿಂದ ಸಂತ್ರಸ್ತರಾದವರಿಗೆ ಶಾಸಕ ಗೋಪಾಲಯ್ಯ ಮತ್ತು ಪಾಲಿಕೆ ಸದಸ್ಯೆ ಎಸ್.ಪಿ.ಹೇಮಲತಾ ಪರಿಹಾರದ ಚೆಕ್ ವಿತರಿಸಿದರು. ಪಡಿತರ ಧಾನ್ಯ ಹಾಗೂ ಸೀರೆಗಳನ್ನು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.