ADVERTISEMENT

45 ನಿಮಿಷಗಳಲ್ಲಿ 3 ಕಡೆ ಸರಗಳವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:13 IST
Last Updated 24 ಜುಲೈ 2014, 20:13 IST

ಬೆಂಗಳೂರು: ಯಲಹಂಕ, ಜ್ಞಾನ ಭಾರತಿ ಮತ್ತು ರಾಜರಾಜೇಶ್ವರಿ­ನಗರದಲ್ಲಿ ಗುರುವಾರ ಬೆಳಿಗ್ಗೆ 45 ನಿಮಿಷಗಳ ಅಂತರದಲ್ಲಿ ದುಷ್ಕರ್ಮಿ ಗಳು ಮೂವರು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ದೋಚಿದ್ದಾರೆ.

ಬೈಕ್‌ನಲ್ಲಿ ಬಂದ ದುಷ್ಕ ರ್ಮಿಗಳು, ಮನೆ ಮುಂದೆ ವಾಯು ವಿಹಾರ ಮಾಡುತ್ತಿದ್ದ ಭಾಗ್ಯಮ್ಮ (45) ಎಂಬುವರಿಂದ 80 ಗ್ರಾಂ ಚಿನ್ನದ ಸರ ದೋಚಿರುವ ಘಟನೆ ಯಲಹಂಕ ಸಮೀಪದ ಜಯಣ್ಣ ಬಡಾವಣೆಯಲ್ಲಿ ನಡೆದಿದೆ.

ಬೆಳಿಗ್ಗೆ 6 ಗಂಟೆಗೆ ಭಾಗ್ಯಮ್ಮ ಅವರನ್ನು ಕಂಡ ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿ ಕೃತ್ಯ ಎಸಗಿದ್ದಾರೆ. ಕಳವಾದ ಸರದ ಮೌಲ್ಯ ₨ 1.6 ಲಕ್ಷ ಎಂದು ಯಲಹಂಕ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಬೆಳಿಗ್ಗೆ 6.30: ಜ್ಞಾನಭಾರತಿ ಸಮೀಪದ ಐಟಿಐ ಲೇಔಟ್‌ನಲ್ಲಿ ಕಿಡಿಗೇಡಿಗಳು ಉಮಾ (72) ಎಂಬುವರ ಸರ ದೋಚಿದ್ದಾರೆ.
ಸಮೀಪದ ಎಂಪಿಎಂ ಲೇಔಟ್ ನಿವಾಸಿಯಾದ ಉಮಾ, ಬೆಳಿಗ್ಗೆ 6.30ಕ್ಕೆ ವಾಯುವಿಹಾರಕ್ಕೆಂದು ಐಟಿಐ ಲೇಔಟ್‌ಗೆ ಬಂದಿದ್ದರು.

ಆಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು, ಎಂಟು ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಿಗ್ಗೆ 6.45: ರಾಜರಾಜೇಶ್ವರಿನಗರ ಸಮೀಪದ ಐಬಿಎಂ ಲೇಔಟ್‌ನಲ್ಲಿ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಸಾವಿತ್ರಮ್ಮ (52) ಎಂಬುವರಿಂದ ದುಷ್ಕರ್ಮಿಗಳು 22 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.