ಬೆಂಗಳೂರು: ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ.
‘ವಾಹನ ಪರವಾನಗಿ ಹೊಂದಿದ ದಕ್ಕಲಿಗ ಸಮುದಾಯದ 8 ಜನರಿಗೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಿಫ್ಟ್ ಡಿಸೈರ್, ಬೊಲೆರೊ, ಮಾರುತಿ ಸ್ವಿಫ್ಟ್ ವಾಹನ ನೀಡಲಿದ್ದಾರೆ’ ಎಂದು ನೋಡಲ್ ಅಧಿಕಾರಿ ಬಾಲಗುರುಮೂರ್ತಿ ತಿಳಿಸಿದರು.
‘ದಕ್ಕಲಿಗ ಸಮುದಾಯದ 1,100 ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಎರಡು ಎಕರೆ ಕೃಷಿ ಜಮೀನು ಹಾಗೂ ಆಯ್ದ ಜಿಲ್ಲೆಗಳಲ್ಲಿ ಮನೆಗಳನ್ನೂ ಕಟ್ಟಿಸಿಕೊಡಲಾಗುವುದು’ ಎಂದು ಅವರು ವಿವರಿಸಿದರು.
‘ರಾಜ್ಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 49 ಸಮುದಾಯಗಳ ಅಡಿಯಲ್ಲಿ ಬರುವ ಅಲೆಮಾರಿ, ಅರೆ ಅಲೆ
ಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ಕೋಶ ರಚಿಸಲಾಗಿದೆ. ಇವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹120 ಕೋಟಿ ಹಣ ಇರಿಸಿದೆ’ ಎಂದು ಅವರು ಹೇಳಿದರು.ದಕ್ಕಲಿಗರು, ಸುಡುಗಾಡು ಸಿದ್ದರು, ಶಿಳ್ಳೆಕ್ಯಾತರು, ಬುಡ್ಗ ಜಂಜಮ್, ಮಾಂಗ್ ಗಾರುಡಿ, ಚನ್ನದಾಸರ್, ದೊಂಬರ, ಗಂಟಿ ಚೋರ್, ಸಿಂಧೋಳ್ಳು, ಹಂದಿ ಜೋಗಿ, ಗೋಸಂಗಿ... ಈ ರೀತಿಯ ಅನೇಕ ಅಲೆಮಾರಿ ಸಮುದಾಯಗಳು ಒಂದು ಕಡೆ ನೆಲೆ ನಿಲ್ಲದೆ ಅನಕ್ಷರಸ್ಥರಾಗಿ ಬದುಕುತ್ತಿದ್ದು ಇವುಗಳ ಸರ್ವತೋಮುಖ ಪ್ರಗತಿಗೆ ಕೋಶ ಶ್ರಮಿಸುತ್ತಿದೆ. ‘ಈ ಸಮುದಾಯಗಳ ಜನ
ಸಂಖ್ಯೆ ಬಳ್ಳಾರಿ, ಯಾದಗಿರಿ, ಕೊಪ್ಪಳ ಹೆಚ್ಚಿನ ಜನಸಂಖ್ಯೆ ಇದೆ. ಅದರಲ್ಲೂ ಬಯಲು ಸೀಮೆಯ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶದ 12 ಜಿಲ್ಲೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೆಂಟ್ಗಳಲ್ಲಿ ವಾಸಿಸುತ್ತಾರೆ’ ಎಂದು ಗುರುಮೂರ್ತಿ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.