ಬೆಂಗಳೂರು: ಹೆಸರಘಟ್ಟ ಸಮೀಪದ ವಡೇರಹಳ್ಳಿಯಲ್ಲಿ ನಿರ್ಮಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಈವರೆಗೆ ತೆರಿಗೆ ಪಾವತಿಸಿಲ್ಲ ಎಂದು ಎಂದು ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ದೂರಿದರು.
ಮತ್ತೂರು, ಪಿಳ್ಳಹಳ್ಳಿ, ಹೊನ್ನಸಂದ್ರ ಮತ್ತು ವಡೇರಹಳ್ಳಿ ವ್ಯಾಪ್ತಿಯ 64 ಎಕರೆ ಭೂಮಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ 2008ರಲ್ಲಿ ನೀಡಲಾಗಿದೆ. ಮಾರುಕಟ್ಟೆಯನ್ನು ನಿರ್ಮಿಸಿ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಈರುಳ್ಳಿ, ಬೆಳುಳ್ಳಿ ಹಾಗೂ ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ತೆರಿಗೆ ಪಾವತಿಸುವಂತೆ ಸಮಿತಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅದಕ್ಕೆ ಯಾವುದೇ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
ಹುಸ್ಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್, ‘ಗ್ರಾಮ ಪಂಚಾಯಿತಿಗೆ ಸೇರಿದ ಭೂಮಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ನೀಡಲಾಗಿದೆ. ಈ ಜಾಗಕ್ಕೆ ತೆರಿಗೆ ಪಾವತಿಸಬೇಕು’ ಎಂದರು.
ವಕೀಲ ಮಹೇಂದ್ರ, ‘ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ವಸೂಲಿ ಮಾಡುವ ಅಧಿಕಾರವಿದೆ. ಮೂಲಸೌಕರ್ಯ ಒದಗಿಸದ ಕಾರಣಕ್ಕೆ ತೆರಿಗೆ ಪಾವತಿಸುವುದಿಲ್ಲ ಎನ್ನುವುದು ಉದ್ಧಟತನದ ಹೇಳಿಕೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.