ಬೆಂಗಳೂರು: ನಾಲ್ಕು ದಶಕಗಳ ಹಳೆಯ ದೇವಸ್ಥಾನ ಧ್ವಂಸಗೊಳಿಸಿರುವ ಆರೋಪದಡಿ ಪಟ್ಟೇಗಾರಪಾಳ್ಯದ ಸೇಂಟ್ ಪೌಲ್ಸ್ ಶಾಲೆಯ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಾಲೆ ಪಕ್ಕದಲ್ಲೇ ಇದ್ದ ಮಾರಮ್ಮನ ಗುಡಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ದೇವಾಲಯದ ಭಕ್ತರು ಬುಧವಾರ ಬೆಳಿಗ್ಗೆ ಶಾಲೆಯ ಎದುರು ಪ್ರತಿಭಟನೆ ಮಾಡಿದರು. ಇದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ, ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.
‘ಆರು ತಿಂಗಳ ಹಿಂದೆ ದೇವಸ್ಥಾನದ ಪಕ್ಕದ ಕಟ್ಟಡ ಖರೀದಿಸಿರುವ ಪ್ರಾಂಶುಪಾಲರಾದ ರೂಪಾ, ಇದೀಗ ದೇವಸ್ಥಾನವನ್ನು ಜೆಸಿಬಿ ಮೂಲಕ ನೆಲಸಮ ಮಾಡಿಸಿದ್ದಾರೆ. ಅಲ್ಲದೆ, ಆ ಜಾಗವೂ ತಮಗೇ ಸೇರಬೇಕು ಎಂದು ವಾದಿಸುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಟ್ರಸ್ಟಿ ಪ್ರಕಾಶ್ ದೂರು ಕೊಟ್ಟಿದ್ದಾರೆ.
ಬಿಬಿಎಂಪಿಗೆ ಪತ್ರ: ‘ಈ ಭೂವಿವಾದದ ಬಗ್ಗೆ ಮಾಹಿತಿ ಕೊಡುವಂತೆ ಬಿಬಿಎಂಪಿಗೆ ಪತ್ರ ಬರೆದಿದ್ದೇವೆ. ಪಾಲಿಕೆ ವರದಿ ಆಧರಿಸಿ ಗೊಂದಲ ಬಗೆಹರಿಸಲಾಗುವುದು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚನ್ನಣ್ಣನವರ್ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.