ADVERTISEMENT

ರೈಲಿನಲ್ಲಿ ಕಂಡ ಗಾಂಧಿ ಬಿಂಬಗಳು...

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 19:42 IST
Last Updated 2 ಅಕ್ಟೋಬರ್ 2018, 19:42 IST
ನಗರದಲ್ಲಿ ಮಂಗಳವಾರ ಭಾರತೀಯ ರೈಲ್ವೆ ಇಲಾಖೆ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿ ವೇಷಧಾರಿಯೊಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಗಳ ಬಗ್ಗೆ ವಿವರಣೆ ನೀಡಿದರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ಭಾರತೀಯ ರೈಲ್ವೆ ಇಲಾಖೆ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿ ವೇಷಧಾರಿಯೊಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಗಳ ಬಗ್ಗೆ ವಿವರಣೆ ನೀಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರೈಲು ಮತ್ತು ಮಹಾತ್ಮ ಗಾಂಧಿ ಒಡನಾಟದ ಅಪರೂಪದ ನೋಟಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಂಗಳವಾರ ಕಂಡುಬಂದವು.

ರೈಲ್ವೆ ಇಲಾಖೆಯು ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ‘ಸ್ವಚ್ಛತಾ ಹಿ ಸೇವಾ’ ಪಾಕ್ಷಿಕವನ್ನು ಸೆ. 15ರಂದು ಆರಂಭಿಸಿತ್ತು. ಇದರ ಸಮಾರೋಪ ಹಾಗೂ ಗಾಂಧಿ ಜಯಂತಿ ಅಂಗವಾಗಿ ನಿಲ್ದಾಣದಲ್ಲಿ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳು, ಚರಕ, ಖಾದಿ ಬಟ್ಟೆಗಳು ಪ್ರದರ್ಶನಗೊಂಡವು.

ಮುಂಬೈಗೆ ರೈಲಿನ ಮೂಲಕ ಹೋಗುತ್ತಿರುವ ಗಾಂಧೀಜಿ, ಲಾಹೋರ್‌ ರೈಲು ನಿಲ್ದಾಣದಲ್ಲಿ ಕಂಡ ಗಾಂಧೀಜಿ, ರೈಲಿನಿಂದ ಹೊರ ತಳ್ಳಲ್ಪಟ್ಟ ಗಾಂಧೀಜಿ...

ADVERTISEMENT

ಇಂಥ ಚಿತ್ರಗಳು ಚೌಕಟ್ಟುಗಳಲ್ಲಿ ಕಂಡುಬಂದವು. ಚರಕದಲ್ಲಿ ನೂಲುತ್ತಿರುವ ಅಭಿನಯ ತೋರಿದ ಗಾಂಧೀಜಿ ವೇಷಧಾರಿ ಗಮನ ಸೆಳೆದರು. ಬಳಿಕ ಕಂಸಾಳೆ ಕಲಾ ಪ್ರದರ್ಶನ ನಡೆಯಿತು.

ಸ್ವಚ್ಛತಾ ಪಾಕ್ಷಿಕದಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳಿಗೆ, ಸ್ವಯಂ ಸೇವಕರಿಗೆ, ಪ್ರಬಂಧ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ, ಸ್ವಚ್ಛತಾ ಕಾರ್ಮಿಕರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಸ್ವಚ್ಛತೆ ನಿರಂತರ: ‘ಸ್ವಚ್ಛತಾ ಕಾರ್ಯಕ್ರಮ ಪಾಕ್ಷಿಕಕ್ಕಷ್ಟೇ ಸೀಮಿತ ಅಲ್ಲ. ಅದು ನಿರಂತರವಾಗಿ ಮುಂದುವರಿಯಲಿದೆ.ಜನ ರೈಲು ನಿಲ್ದಾಣ ಹಾಗೂ ಬೋಗಿಗಳ ಒಳಗೆ ಕಸ ಹಾಕುವುದನ್ನು ನಿಲ್ಲಿಸಬೇಕು.ಸ್ವಚ್ಛತಾ ಪ್ರಜ್ಞೆ ಅವರಲ್ಲಿ ಮೂಡಿದಾಗ ಬದಲಾವಣೆ ಸಾಧ್ಯ’ ಎಂದು
ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌. ಸಕ್ಸೇನಾ ಅಭಿಪ್ರಾಯಪಟ್ಟರು.

‘ಮುಂದೆ ಸಾಂಪ್ರದಾಯಿಕ ಕೋಚ್‌ಗಳ ಬದಲಿಗೆ ಮೆಮು ಕೋಚ್‌ಗಳ (ಸಾಮಾನ್ಯ ಆಸನ ಹೊಂದಿರುವ, ಹೆಚ್ಚು ಜನ ನಿಂತು ಪ್ರಯಾಣಿಸಲು ಅನುಕೂಲವಿರುವ)ರೈಲುಗಳು ಉಪನಗರ ವ್ಯಾಪ್ತಿಯಲ್ಲಿ ಓಡಾಡಲಿವೆ. ಸ್ವಚ್ಛತೆಗಾಗಿ ಅವುಗಳನ್ನು ದೀರ್ಘಕಾಲ ನಿಲ್ಲಿಸಿದರೆ ಜನರಿಗೆ ಸೇವೆ ಒದಗಿಸಲು ತೊಂದರೆಯಾಗುತ್ತದೆ. ಅದಕ್ಕಾಗಿ ಜನರು ಪ್ರಜ್ಞಾವಂತಿಕೆ ತೋರಿ ರೈಲುಗಳನ್ನು
ಸ್ವಚ್ಛವಾಗಿರಿಸಲು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.