ಔರಾದ್: ಪಟ್ಟಣದ ಗೌಂಡಿ ಗಲ್ಲಿಯಲ್ಲಿ ಕೊಳವೆ ಬಾವಿಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಳೆದ ಐದಾರು ತಿಂಗಳ ಹಿಂದೆ ಪಟ್ಟಣದ ಉದಗೀರ್ ರಸ್ತೆಯಲ್ಲಿನ ವಾರ್ಡ್ 4ರ ಗೌಂಡಿ ಗಲ್ಲಿಯಲ್ಲಿ ಸುಮಾರು 350 ಅಡಿ ಆಳದ ಕೊಳವೆ ಬಾವಿ ಕೊರೆಯಲಾಗಿದ್ದು, ಎರಡು ಇಂಚು ನೀರು ಕೂಡ ಸಿಕ್ಕಿದೆ. ಕೈ ಪಂಪು ಅಳವಡಿಸದೆ ಹಾಗೆಯೇ ಬಿಡಲಾಗಿದೆ ಎಂದು ಅಲ್ಲಿಯ ನಿವಾಸಿಗಳು ಹೇಳುತ್ತಾರೆ.
‘ನಮಗೆ ನೀರು ಬೇಡ’ ಏನಾದರೂ ಮಾಡಿ ಅಪಾಯವಾಗದಂತೆ ವ್ಯವಸ್ಥೆ ಮಾಡಿ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕೇಳಿಕೊಂಡರೂ ಮನವಿಗೆ ಸ್ಪಂದಿಸಿಲ್ಲ ಎಂದು ಅಲ್ಲಿಯ ಮಹಿಳೆಯರು ಗೋಳಾಡಿದ್ದಾರೆ.
ಮಕ್ಕಳು ಹೊರಗೆ ಬಂದರೆ ಬಾವಿ ಕಡೆ ಹೋಗದಂತೆ ನೋಡಿಕೊಳ್ಳವುದೇ ನಿತ್ಯದ ಕೆಲಸ ಆಗಿದೆ. ಯಾವಾಗ ಏನಾಗುತ್ತದೋ ಆ ದೇವರೆ ಬಲ್ಲ ಎಂದು ಅಲ್ಲಿಯ ಪಾಲಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೊರೆದ ಕೊಳವೆ ಬಾವಿ ಹಾಗೆಯೇ ಬಿಡುವಂತಿಲ್ಲ. ಹಾಗೇನಾದರೂ ನಿರ್ಲಕ್ಷ್ಯ ವಹಿಸಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಪಟ್ಟಣದ ಗೌಂಡಿ ಗಲ್ಲಿಯಲ್ಲಿ ಕೊರೆದ ಬಾವಿ ಹಾಗೆಯೇ ಬಿಟ್ಟರೂ ಸಂಬಂಧಿತರ ವಿರುದ್ಧ ಕ್ರಮ ಜರುಗಿಸದೆ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
‘ಕೊರೆದ ಬಾವಿ ಹಾಗೆಯೇ ಬಿಟ್ಟಿರುವುದು ಗಮನಕ್ಕೆ ಬಂದಿಲ್ಲ. ಸಂಬಂಧಿತ ಅಧಿಕಾರಿಗೆ ಸೂಚಿಸಿ ಅಪಾಯವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಣುಕಾ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.